ಸಾರಾಂಶ
ವಾಲ್ಮೀಕಿ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ । ತಹಸೀಲ್ದಾರರಿಗೆ ಮನವಿ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಮಹರ್ಷಿ ವಾಲ್ಮೀಕಿ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಇಲ್ಲಿನ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಸರ್ಕಾರದ ನಿಲುವನ್ನು ಖಂಡಿಸಿದರು.ಪರಿಶಿಷ್ಟ ಪಂಗಡದಲ್ಲಿ ಈಗಾಗಲೇ 50ಕ್ಕೂ ಹೆಚ್ಚಿನ ಸಮುದಾಯಗಳನ್ನು ಸೇರಿಸಲಾಗಿದೆ. ಈಗಿರುವ ಮೀಸಲಾತಿಯಲ್ಲಿ ಎಲ್ಲಾ ವರ್ಗಕ್ಕೂ ಸಮಾಜಿಕ ನ್ಯಾಯ ದೊರಕದಂತಾಗಿದೆ. ವಾಲ್ಮೀಕಿ ಸಮುದಾಯ ಬುಡಕಟ್ಟು ಸಂಪ್ರದಾಯ ಮತ್ತು ಆಚರಣೆಗಳಿಂದ ಇಂದಿಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುತ್ತಾ ಅತ್ಯಂತ ಹಿಂದುಳಿದಿದೆ. ಸಾಮಾಜಿಕವಾಗಿ, ಶಿಕ್ಷಣಿಕವಾಗಿ, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅನ್ಯ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದಲ್ಲಿ ನಾಯಕ ಸಮುದಾಯ ಇನ್ನಷ್ಟು ಅನ್ಯಾಯಕ್ಕೆ ಒಳಗಾಗುತ್ತಿದೆ. ಹಾಗಾಗಿ ಸರ್ಕಾರ ಇಂಥ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆಈಗಿರುವ ಶೇ.7 ಮೀಸಲಾತಿ ಪ್ರಮಾಣವನ್ನು 14ಕ್ಕೆ ಹೆಚ್ಚಳ ಮಾಡಲು ಸಮುದಾಯದ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು. ಅಲ್ಲದೆ ಪರಿಶಿಷ್ಟ ಪಂಗಡದಲ್ಲಿ ಜಾತಿ ಜನಸಂಖ್ಯೆ ಗುನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಯುವ ಮುಖಂಡ ಪಾಪೇಶ್ ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಹಾನಗಲ್ ತಿಪ್ಪಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ಮಂಜಣ್ಣ, ರಮೇಶ್ ದಳವಾಯಿ, ದರ್ಶನ್, ಪ್ರಭಾಕರ, ಪ್ರಹ್ಲಾದ್, ಸಂಜೀವಪ್ಪ, ಕರಿಬಸವ ನಾಯಕ, ಹೂಲಯ್ಯ, ಬಿಜಿಕೆರೆ ನಿಂಗಣ್ಣ, ಜೀರಳ್ಜಿ ತಿಪ್ಪೇಸ್ವಾಮಿ, ಪಾಲಯ್ಯ, ಮಲ್ಲಿಕಾರ್ಜುನ, ಬೊಮ್ಮಯ್ಯ, ಸಣ್ಣ ಒಬಣ್ಣ, ಭರತ್ ಭೂಷಣ್, ತಿಪ್ಪೇಸ್ವಾಮಿ, ಕೋನಸಾಗರ ಪಾಲಯ್ಯ ಇದ್ದರು.