ಏ. 25ರಿಂದ 5 ದಿನ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಇನ್ಕಾಮೆಕ್ಸ್-2026ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಹಾಗೂ ಈ ಭಾಗಕ್ಕೆ ಹೆಚ್ಚಿನ ಕೈಗಾರಿಕೆಗಳು ಬರುವ ಕುರಿತು ಚರ್ಚೆ ನಡೆಯುವಂತಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.
ಹುಬ್ಬಳ್ಳಿ:
ನಗರದಲ್ಲಿ ಏ. 25ರಿಂದ 5 ದಿನ ಆಯೋಜಿಸಿರುವ ಇನ್ಕಾಮೆಕ್ಸ್-2026ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಹಾಗೂ ಈ ಭಾಗಕ್ಕೆ ಹೆಚ್ಚಿನ ಕೈಗಾರಿಕೆಗಳು ಬರುವ ಕುರಿತು ಚರ್ಚೆ ನಡೆಯುವಂತಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಇನ್ಕಾಮೆಕ್ಸ್-2026 ಪೂರ್ವಸಿದ್ಧತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಏ. 25ರಿಂದ 29ರ ವರೆಗೆ ನಡೆಯಲಿರುವ ಇನ್ಕಾಮೆಕ್ಸ್-2026 ಯಶಸ್ಸಿಗೆ ಎಲ್ಲ ಜನಪ್ರತಿನಿಧಿಗಳು, ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಸೇರಿ ಒಂದು ತಂಡವಾಗಿ ಕೆಲಸ ಮಾಡೋಣ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಹೆಚ್ಚಿನ ಬಿಸಿಲು ಇರುವುದರಿಂದ ಕುಡಿಯುವ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಿ. ಸಾಧ್ಯವಾದರೆ ಪೈಪ್ಲೈನ್ ಅಳವಡಿಸುವಂತೆ ಎಲ್ ಆ್ಯಂಡ್ ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ತೋಟಗಾರಿಕೆ ಇಲಾಖೆ ಸುಂದರ ಸಸಿಗಳಿರುವ 500ಕ್ಕೂ ಹೆಚ್ಚು ಪಾಟ್ ಇಡಬೇಕು. ಬಿಆರ್ಟಿಎಸ್ ಹೆಚ್ಚು ಬಸ್ಗಳ ಸಂಚಾರ ಆರಂಭಿಸಬೇಕು ಹಾಗೂ ಇನ್ಕಾಮೆಕ್ಸ್ ನಡೆಯಲಿರುವ ಅಮರಗೋಳ ಎಪಿಎಂಸಿ ಯಾರ್ಡ್ನ ಹುಬ್ಬಳ್ಳಿ-ಧಾರವಾಡ ಮಲ್ಟಿ ಪರಪೋಸ್ ಸೆಂಟರ್ ಬಳಿ ಎಲ್ಲ ಬಸ್ಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಿದರು.
ಎಪಿಎಂಸಿ ಯಾರ್ಡ್ ಬಳಿಯ ಡಬ್ಬಿ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಇನ್ಕಾಮೆಕ್ಸ್ ಮುಗಿದ ನಂತರ ಡಬ್ಬಿ ಅಂಗಡಿ ಮಾಲಿಕರಿಗೆ ಮರಳಿ ವ್ಯಾಪಾರ ಆರಂಭಿಸಲು ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.ಇನ್ಕಾಮೆಕ್ಸ್ಗೆ ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಸಮರ್ಪಕ ವಾಹನ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸ್ ಇಲಾಖೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪಿಯುಷ್ ಗೋಯಲ್, ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವರಾದ ಎಂ.ಬಿ. ಪಾಟೀಲ, ಸಂತೋಷ ಲಾಡ್ ಸೇರಿದಂತೆ ಇನ್ಕಾಮೆಕ್ಸ್ಗೆ ಆಗಮಿಸಲಿರುವ ಇತರ ಅತಿಥಿಗಳು ಹಾಗೂ ಭಾಗವಹಿಸಲಿರುವ ವಿವಿಧ ಉದ್ಯಮಗಳ ಕುರಿತು ಮಾಹಿತಿ ನೀಡಿದರು.ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪನವರ, ವಿಜಯ ಜವಳಿ, ಜಯಪ್ರಕಾಶ ಟೆಂಗಿನಕಾಯಿ, ವೀರಣ್ಣ ಕಲ್ಲೂರ, ಶಶಿಧರ ಶೆಟ್ಟರ ಸೇರಿದಂತೆ ಹಲವರಿದ್ದರು.