ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನಲ್ಲಿ ಬಿಡುವು ನೀಡಿ ಉತ್ತಮ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಒಳಹರಿವು ಹೆಚ್ಚಳವಾಗಿದೆ.ಉತ್ತಮ ಮಳೆ ಹಿನ್ನೆಲೆ ಹಾರಂಗಿಗೆ 2844 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2859 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈಗಾಗಲೇ 2844 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ 15 ಅಡಿ ಮಾತ್ರವೇ ಬಾಕಿಯಿದೆ.
8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 4.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕೇವಲ 2 ಟಿಎಂಸಿ ಅಡಿ ನೀರು ಮಾತ್ರವೇ ಸಂಗ್ರಹವಾಗಿತ್ತು. ಕಳೆದ ವರ್ಷ ಮಳೆಯ ತೀವ್ರ ಕೊರತೆ ಆಗಿದ್ದ ಹಿನ್ನೆಲೆ, ಬೇಸಿಗೆಯಲ್ಲಿ ಸಂಪೂರ್ಣವಾಗಿ ಜಲಾಶಯ ಖಾಲಿಯಾಗಿತ್ತು.ಹಾರಂಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೊಡಗು, ಮೈಸೂರು ಮತ್ತು ಹಾಸನ ಜಿಲ್ಲೆಗಳ ರೈತರಲ್ಲಿ ಸಂತಸ ಮೂಡಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಶೀಘ್ರವೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಜಿಲ್ಲೆಯಾದ್ಯಂತ ಗುರುವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲ ಕಾಲ ಉತ್ತಮ ಮಳೆ ಸುರಿಯಿತು. ನಂತರ ಕೆಲವೆಡೆ ಬಿಸಿಲಿನ ವಾತಾವರಣ ಕಂಡುಬಂತು.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 51.41 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 87.63 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 5.25 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 52.02 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 50.55 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 21.60 ಮಿ.ಮೀ. ಮಳೆಯಾಗಿದೆ.
ಹೋಬಳಿ ವಿವರ:ಮಡಿಕೇರಿ ಕಸಬಾ 88.40, ನಾಪೋಕ್ಲು 62.20, ಸಂಪಾಜೆ 86.50, ಭಾಗಮಂಡಲ 113.40, ವಿರಾಜಪೇಟೆ 51, ಅಮ್ಮತ್ತಿ 39.50, ಹುದಿಕೇರಿ 90, ಶ್ರೀಮಂಗಲ 67, ಪೊನ್ನಂಪೇಟೆ 32, ಬಾಳೆಲೆ 19.06, ಸೋಮವಾರಪೇಟೆ ಕಸಬಾ 52, ಶನಿವಾರಸಂತೆ 19, ಶಾಂತಳ್ಳಿ 112, ಕೊಡ್ಲಿಪೇಟೆ 19.20, ಕುಶಾಲನಗರ 18.20, ಸುಂಟಿಕೊಪ್ಪ 25 ಮಿ.ಮೀ.ಮಳೆಯಾಗಿದೆ.