ಅಜಾಗರೂಕತೆ ವಾಹನ ಚಾಲನೆ, ಮದ್ಯಪಾನ, ಅತಿ ವೇಗದ ಚಾಲನೆ, ಮೊಬೈಲ್ ಫೋನ್ ಬಳಕೆ, ಸಂಚಾರ ನಿಯಮ ಉಲ್ಲಂಘನೆ, ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸದಿರುವುದು ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಗಲಿದೆ. ಕಾನೂನು ಮತ್ತು ಸಂಚಾರಿ ನಿಯಮ ಪಾಲಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಂಚಾರಿ ನಿಯಮಗಳ ಉಲ್ಲಂಘನೆ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದಲ್ಲಿ ನಾಗಮಂಗಲ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮಾಸಾಚರಣೆ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಭೂಮಿ ಮೇಲೆ ಜೀವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲ ಹಕ್ಕು. ಆದ್ದರಿಂದ ರಸ್ತೆ ಸುರಕ್ಷತಾ ಕ್ರಮ ಅನುಸರಿಸಿ ಅಪಘಾತ ತಪ್ಪಿಸುವ ಮೂಲಕ ಇತರರ ಹಕ್ಕುಗಳನ್ನು ಗೌರವಿಸಬೇಕು ಎಂದರು.
ಅಜಾಗರೂಕತೆ ವಾಹನ ಚಾಲನೆ, ಮದ್ಯಪಾನ, ಅತಿ ವೇಗದ ಚಾಲನೆ, ಮೊಬೈಲ್ ಫೋನ್ ಬಳಕೆ, ಸಂಚಾರ ನಿಯಮ ಉಲ್ಲಂಘನೆ, ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸದಿರುವುದು ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಗಲಿದೆ. ಕಾನೂನು ಮತ್ತು ಸಂಚಾರಿ ನಿಯಮ ಪಾಲಿಸಬೇಕು ಎಂದರು.ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಸಹಾಯ ನಿರ್ದೇಶಕ ಹೊನ್ನೇಗೌಡ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ರಸ್ತೆ ಅಪಘಾತ ತಡೆಗಟ್ಟಲು ಮತ್ತು ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಮಾತನಾಡಿ, ವಾಹನ ಸವಾರರು ಜೀವ ರಕ್ಷಣೆ ಹಾಗೂ ಕುಟುಂಬ ಭದ್ರತೆ ಸಲುವಾಗಿ ಹೊರಡಬೇಕಾದ ಸ್ಥಳಕ್ಕೆ ಬೇಗ ಹೊರಟು ನಿಧಾನವಾಗಿ ವಾಹನ ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.ಮೈಸೂರು ರಸ್ತೆಯಿಂದ ಆರಂಭಗೊಂಡ ಸಂಚಾರಿ ಜಾಗೃತಿ ಜಾಥಾ ಟಿ.ಬಿ. ವೃತ್ತದ ಮೂಲಕ ಹಾದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಾಥಾದಲ್ಲಿ ವಾಹನ ಸವಾರರು ಪಾಲ್ಗೊಂಡು ಹೆಲ್ಮಟ್ ಧರಿಸಿ, ಪ್ರಾಣ ಉಳಿಸಿ, ಸೀಟ್ ಬೆಲ್ಟ್ ಕಡ್ಡಾಯ, ಮದ್ಯಪಾನ ಮಾಡಿ ವಾಹನ ಚಲಾಯಿಸ ಬೇಡಿ, ಸಮಯಕ್ಕಿಂತ ಜೀವ ಮುಖ್ಯ, ಮೊಬೈಲ್ ಬಳಸಬೇಡಿ ಎಂಬ ವಿವಿಧ ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಆಂನಂದೇಗೌಡ, ನಾಗಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ.ಎನ್ ಸತೀಶ್, ಮೋಟಾರು ವಾಹನ ನಿರೀಕ್ಷಕಿ ಶಬಜಾಭಾನು ಸೇರಿದಂತೆ ಹಲವರು ಉಪಸ್ಥಿತರಿದ್ದರು.