ಸಾರಾಂಶ
ರಾಮನಗರ: ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ಜೂನ್ 19ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಲ್ಲಿ ಗದ್ದುಗೆ ಹಿಡಿಯಲು ಪೈಪೋಟಿ ತೀವ್ರಗೊಂಡಿದೆ.
ಬಮೂಲ್ ನಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಬಹುಮತವನ್ನು ಕಾಂಗ್ರೆಸ್ ಹೊಂದಿದೆ. ಹೀಗಾಗಿ ಆಯ್ಕೆಯಾಗಿರುವವರ ಪೈಕಿ ಹಿರಿಯ ನಿರ್ದೇಶಕರು ಅಧ್ಯಕ್ಷ ಸ್ಥಾನ ಪಡೆಯಲೇಬೇಕೆಂಬ ಉದ್ದೇಶದಿಂದ ಪಕ್ಷದ ವರಿಷ್ಠರ ಬೆನ್ನುಬಿದ್ದಿದ್ದಾರೆ.ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ಚನ್ನಪಟ್ಟಣದಿಂದ ಗೆಲುವು ಸಾಧಿಸಿರುವ ಎಸ್.ಲಿಂಗೇಶ್ಕುಮಾರ್, ಮಾಗಡಿಯಿಂದ ಗೆಲುವು ಸಾಧಿಸಿರುವ ಎಚ್.ಎನ್.ಅಶೋಕ್, ಕುದೂರಿನ ರಾಜಣ್ಣ ಮತ್ತು ಹಾರೋಹಳ್ಳಿ ಆನಂದ್ಕುಮಾರ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಐವರ ಪೈಕಿ ನೂತನ ನಿರ್ದೇಶಕರಾಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಕೂಡ ಕೇಳಿ ಬರುತ್ತಿದೆ.
ಹಾಗೊಂದು ವೇಳೆ ಡಿ.ಕೆ.ಸುರೇಶ್ ಅಧ್ಯಕ್ಷ ಸ್ಥಾನ ಅಲಂಕರಿಸಲು ನಿರಾಕರಿಸಿದರಷ್ಟೇ ಬೇರೆಯವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಅದನ್ನು ಸಹ ಡಿ.ಕೆ.ಸುರೇಶ್ ಅವರೇ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇದೀಗ ಆಯ್ಕೆಯಾಗಿರುವ ಸದಸ್ಯರ ಪೈಕಿ ರಾಮನಗರದ ನಿರ್ದೇಶಕ ಪಿ.ನಾಗರಾಜು ಬಮೂಲ್ಗೆ ಅತಿಹೆಚ್ಚು ಬಾರಿ ಆಯ್ಕೆಯಾಗಿರುವ ನಿರ್ದೇಶಕ ಎನಿಸಿಕೊಂಡಿದ್ದಾರೆ. 6 ಬಾರಿ ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಇವರು ಎರಡು ಬಾರಿ ಬಮೂಲ್ ಅಧ್ಯಕ್ಷರಾಗಿ, ಒಂದು ಬಾರಿ ಕೆಎಂಎಫ್ ಅಧ್ಯಕ್ಷರಾಗಿ, ಎರಡು ಬಾರಿ ಬಮೂಲ್ನಿಂದ ಕೆಎಂಎಫ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವುದಾ ಕಾದು ನೋಡಬೇಕಿದೆ.ಚನ್ನಪಟ್ಟಣದಿಂದ ಆಯ್ಕೆಯಾಗಿರುವ ಎಸ್.ಲಿಂಗೇಶ್ಕುಮಾರ್ ಸಹ 4ನೇ ಬಾರಿಗೆ ಬಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಬಮುಲ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಇವರು ಒಬ್ಬರೆನಿಸಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಬಮುಲ್ ಅಧ್ಯಕ್ಷ ಸ್ಥಾನ ಚನ್ನಪಟ್ಟಣಕ್ಕೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಲಿಂಗೇಶ್ ಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಲಿಂಗೇಶ್ಕುಮಾರ್ ಪರವಾಗಿರುವ ಕೆಲ ಕೈ ಮುಖಂಡರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಇನ್ನು ಕೆಲ ವರ್ಷಗಳಿಂದ ರಾಮನಗರ ಜಿಲ್ಲೆಯ ಮೂರು ತಾಲೂಕಿನವರು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಈ ಬಾರಿ ಲಿಂಗೇಶ್ಕುಮಾರ್ ಗೆ ಅವಕಾಶ ನೀಡುವ ಮೂಲಕ ಚನ್ನಪಟ್ಟಣಕ್ಕೂ ಪ್ರಾಧಾನ್ಯತೆ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ.
ಇನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸಹೋದರ ಎಚ್.ಎನ್.ಅಶೋಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣೀರಿಸಿದ್ದಾರೆ. ಇನ್ನು ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಕುದೂರು ಕ್ಷೇತ್ರದ ರಾಜಣ್ಣ, ಹಾರೋಹಳ್ಳಿ ಕ್ಷೇತ್ರದ ಹರೀಶ್ಕುಮಾರ್ ಸಹ ಅಧ್ಯಕ್ಷ ಸ್ಥಾನಕ್ಕೆ ತಮ್ಮದೇ ಆದ ಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷದ ಮುಖಂಡರು ಮತ್ತು ವರಿಷ್ಟರನ್ನು ಭೇಟಿ ಮಾಡಿ ಈ ಬಾರಿ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.ಅಧಿಕಾರ ಹಂಚಿಕೆ ಸೂತ್ರ:
ಒಕ್ಕೂಟದ ಅಧ್ಯಕ್ಷ ಚುನಾವಣೆಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಅನುಸರಿಸಲು ಕೈ ವರಿಷ್ಠರು ಮುಂದಾಗುವ ಸಾಧ್ಯತೆಗಳೆ ಹೆಚ್ಚಾಗಿದೆ. ಇದಕ್ಕೆ ಕಾರಣ ಏನೆಂದರೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಜೊತೆಗೆ ಬೆಂಗಳೂರು ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೂ ಅವಕಾಶ ಮಾಡಿಕೊಡಬೇಕಿದೆ. ಪ್ರಬಲ ಆಕಾಂಕ್ಷಿಗಳನ್ನು ಸಮಾಧಾನಪಡಿಸಿ 5 ವರ್ಷಗಳ ಅಧಿಕಾರವಧಿಯನ್ನು ಹಂಚಿಕೆ ಮಾಡಿ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಇನ್ನು ಬಮೂಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಪರ್ಯಾಯ ಅಧಿಕಾರಗಳನ್ನು ನೀಡಿ ಸಮಾಧಾನ ಮಾಡುವ ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರು ಚಿಂತಿಸಿದ್ದು, ಉಪಾಧ್ಯಕ್ಷ ಸ್ಥಾನ, ಬಮೂಲ್ ಆಡಳಿತ ಮಂಡಳಿಯಲ್ಲಿ ಪ್ರಮುಖ ತೀರ್ಮಾನವನ್ನು ಕೈಗೊಳ್ಳುವ ಇಪಿಸಿ(ಎಕ್ಸ್ಪರ್ಟ್ ಪ್ಯಾನಲ್ ಕಮಿಟಿ) ಸದಸ್ಯ ಸ್ಥಾನ ನೀಡುವ ಮೂಲಕ ಆಕಾಂಕ್ಷಿತರನ್ನು ಸಮಾಧಾನಪಡಿಸುವ ಸೂತ್ರವನ್ನು ಕೈ ನಾಯಕರು ಹೊಂದಿದ್ದಾರೆ.
ಡಿ.ಕೆ.ಸುರೇಶ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಆನೇಕಲ್ ಕ್ಷೇತ್ರ ನಿರ್ದೇಶಕ ಆರ್.ಕೆ.ರಮೇಶ್ ಅಧ್ಯಕ್ಷರಾಗುವ ಬಯಕೆ ಹೊಂದಿದ್ದಾರೆ. ಅಲ್ಲದೆ, ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆಯಿಂದ ಆಯ್ಕೆಯಾಗಿರುವ ಬಿ.ವಿ.ಸತೀಶ್ ಗೌಡರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪ್ರಯತ್ನ ನಡೆಸುತ್ತಿದ್ದಾರೆ.ಕೆಎಂಎಫ್ಗೆ ಒಬ್ಬ ನಿರ್ದೇಶಕರನ್ನು ನಾಮನಿರ್ದೇಶಕ ಮಾಡಲು ಅವಕಾಶವಿದೆಯಾದರೂ, ಈ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಬಹುತೇಕ ಖಚಿತವಾಗಿರುವ ಕಾರಣ ಉಳಿದ ಮೂರು ಅಧಿಕಾರಗಳನ್ನು ಪಕ್ಷದ ಎಲ್ಲಾ ನಿರ್ದೇಶಕರಿಗೆ ಹಂಚಿಕೆ ಮಾಡಲು ಕೈ ನಾಯಕರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಕ್ಸ್ ...........ಅಧ್ಯಕ್ಷ ಸ್ಥಾನದ ಮೇಲೆ ಡಿಕೆಸುರೇಶ್ ಕಣ್ಣು
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನದ ಮೇಲೆ ಮಾಜಿ ಸಂಸದ ಡಿ.ಕೆ.ಸುರೇಶ್ ಕಣ್ಣಿಟ್ಟಿದ್ದಾರೆ. ಆದರೆ, ಅದರ ಅವಧಿ 3- 4 ತಿಂಗಳು ಬಾಕಿ ಇದೆ. ಅಲ್ಲಿವರೆಗೆ ಬಮೂಲ್ ಅಧ್ಯಕ್ಷ ಸ್ಥಾನವನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಅಲಂಕರಿಸಲಿ ಎಂಬುದು ಬಹುತೇಕ ನಿರ್ದೇಶಕರ ಒತ್ತಾಯವಾಗಿದೆ. ಕೆಎಂಎಫ್ ಗೆ ಪ್ರತಿ ಒಕ್ಕೂಟದಿಂದ ಒಬ್ಬ ನಿರ್ದೇಶಕನನ್ನು ನಾಮನಿರ್ದೇಶನ ಮಾಡಬೇಕು. ಈ ಬಾರಿ ಬಮೂಲ್ನಿಂದ ಡಿ.ಕೆ.ಸುರೇಶ್ ರವರ ನಾಮನಿರ್ದೇಶನ ಬಹುತೇಕ ಖಚಿತವಾಗಿದೆ. ಆದರೆ, ರಾಜ್ಯದ ಬೇರೆ ಒಕ್ಕೂಟಗಳ ನಿರ್ದೇಶಕ ಸ್ಥಾನದ ಚುನಾವಣೆ ಹಾಗೂ ಅಧ್ಯಕ್ಷರ ಆಯ್ಕೆ ಬಾಕಿಯಿದೆ. ಇದೆಲ್ಲ ಮುಗಿಯಲು ಮೂರು ನಾಲ್ಕು ತಿಂಗಳು ಬೇಕಾಗುತ್ತದೆ.------------------------------------------
16ಕೆಆರ್ ಎಂಎನ್ .1ಜೆಪಿಜಿಬಮೂಲ್ ಕಚೇರಿ
----------------------------------------