ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೊಟ್ಟಮೊದಲ ಬಾರಿಗೆ ನವಜಾತ ಶಿಶುಗಳ ಆರೈಕೆಗೆ ರಿಯಾಯಿತಿ ದರದಲ್ಲಿ ಇನ್ಕ್ಯುಬೇಟರ್ ಮತ್ತು ವೆಂಟಿಲೇಟರ್ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿರುವುದಾಗಿ ಅರಿವಳಿಕೆ ಮತ್ತು ತೀವ್ರ ನಿಗಾ ಘಟಕ ತಜ್ಞ ಹಾಗೂ ಆಸ್ಪತ್ರೆಯ ನಿರ್ದೇಶಕರಾದ ಡಾ. ಜೆ.ಕೆ. ಯತೀಶ್ ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಮ್ಮ ಆಸ್ಪತ್ರೆಯಿಂದ ನವಜಾತ ಶಿಶುಗಳ ಆರೈಕೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ಜಿಲ್ಲೆಯ ಮತ್ತು ಅಕ್ಕಪಕ್ಕದ ಜಿಲ್ಲೆಯ ಎಲ್ಲಾ ತಾಲೂಕುಗಳು, ಹೋಬಳಿಗಳ ಚಿಕಿತ್ಸಾ ಕೇಂದ್ರ ಮತ್ತು ಇತರೆ ಆಸ್ಪತ್ರೆಗಳಲ್ಲಿ ಜನಿಸಿದ ಹೆಚ್ಚುವರಿ ಹಾಗೂ ತೀವ್ರ ನಿಗಾಘಟಕ ಚಿಕಿತ್ಸೆ ಅಗತ್ಯವಿರುವ ನವಜಾತ ಶಿಶುಗಳನ್ನು ಸಾಗಿಸಲು ಈ ಸೌಲಭ್ಯ ಬಹು ಉಪಯೋಗಕರವಾಗಲಿದೆ. ನವಜಾತ ಶಿಶುಗಳನ್ನು ಹೆರಿಗೆ ಆದ ಸ್ಥಳದಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುವ ಸಮಯ ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತದೆ ಎಂದರು.
ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ. ಬಿ. ದಿನೇಶ್ ಮಾತನಾಡಿ, ತಾಯಿಯ ಗರ್ಭದಲ್ಲಿದ್ದಂತಹ ವಾತಾವರಣ ಅಗತ್ಯ ಮತ್ತು ಬಹು ಅವಶ್ಯಕವಾಗಿರುತ್ತದೆ. ಅಂದರೆ ದೇಹದ ಶಾಖ, ಉಸಿರಾಟ, ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯವಿರುತ್ತದೆ ಎಂದರು. ಈ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಇನ್ಕ್ಯುಬೇಟರ್ ಹಾಗೂ ಇವುಗಳನ್ನು ನಿಭಾಯಿಸಲು ವಿಶೇಷ ತರಬೇತಿ ಹೊಂದಿದ ವೈದ್ಯರು ಸಿಬ್ಬಂದಿಗಳೊಂದಿಗೆ ಅತಿ ಜಾಗರೂಕತೆಯಿಂದ ಕರೆತರಲಾಗುತ್ತದೆ. ಈ ವಿಶೇಷ ಸೌಲಭ್ಯವನ್ನು ಮಣಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯವರು ಹಾಸನ ಜಿಲ್ಲೆಯ ಜನತೆಗೆ ಮೊದಲ ಬಾರಿಗೆ ಪರಿಚಯಿಸುತ್ತಿದ್ದಾರೆ ಎಂದು ಹೇಳಿದರು.ವೈದ್ಯಕೀಯ ನಿರ್ದೇಶಕರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಬಿ.ಕೆ. ಸೌಮ್ಯಮಣಿ ಮಾತನಾಡಿ, ಶಿಶುಗಳ ರಕ್ಷಣೆಗಾಗಿ ನಾವು ಈ ವಿನೂತನವಾದ ನವಜಾತ ಶಿಶುಗಳ ಆರೈಕೆಗೆ ರಿಯಾಯಿತಿ ದರದಲ್ಲಿ ಇನ್ಕ್ಯುಬೇಟರ್ ಮತ್ತು ವೆಂಟಿಲೇಟರ್ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ. ತಾಯಿಗೆ ತೊಂದರೆ ಆಗುತ್ತಿದ್ದಾಗ ತಕ್ಷಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಇನ್ನು ಶಿಶುವನ್ನು ಮಾತ್ರ ಶಿಫ್ಟ್ ಮಾಡಬೇಕಾದಾಗ ಕಾಲ್ ಮಾಡಿದರೇ ಅದರಲ್ಲಿ ವೈದ್ಯರು, ಸ್ಟಾಫ್ ನರ್ಸ್ ಎಲ್ಲರೂ ಸೇರಿ ಆ್ಯಂಬುಲೆನ್ಸ್ ಮೂಲಕ ಶೀಘ್ರ ತಲುಪಿ ಆಸ್ಪತ್ರೆಗೆ ಬಿಡುತ್ತಾರೆ ಎಂದರು.