ಪಬ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಯುವಕನ ಮೇಲೆ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕನು ಪ್ರತಿ ದೂರು ದಾಖಲಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಪಬ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಯುವಕನ ಮೇಲೆ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕನು ಪ್ರತಿ ದೂರು ದಾಖಲಿಸಿದ್ದಾನೆ.

ನಾಗರಬಾವಿ ರಸ್ತೆಯಲ್ಲಿ ಇರುವ ಪಬ್‌‌ನಲ್ಲಿ ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪ ಸಂಬಂಧ ಉಮೇಶ್ ಮತ್ತು ಹೇಮಂತ್ ಎಂಬುವವರ ನಡುವೆ ಗಲಾಟೆ ನಡೆದಿದೆ.

ಉಮೇಶ್ ಪಬ್‌ಗೆ ಬಂದಿದ್ದ ಯುವತಿಯರ ಫೋನ್‌ ನಂಬರ್ ಕೇಳಿದ್ದ ಎನ್ನಲಾಗಿದೆ. ನಂಬರ್‌ ನೀಡಲು ನಿರಾಕರಿಸಿದ್ದಕ್ಕೆ ಯುವತಿಯರ ಜತೆ ಅಸಭ್ಯ ವರ್ತನೆ ತೋರಿದ್ದಾನೆ ಎನ್ನಲಾಗಿದೆ. ಈ ವೇಳೆ ಪಬ್ ಸಿಬ್ಬಂದಿಗೆ ಹೇಮಂತ್‌ ದೂರು ಹೇಳಿದ್ದ. ನಂತರ ಪಬ್‌ ಸಿಬ್ಬಂದಿ ಉಮೇಶ್ ಟೇಬಲ್‌ನನ್ನು ಬೇರೆ ಕಡೆಗೆ ಶಿಫ್ಟ್ ಮಾಡಿದ್ದಾರೆ. ಪಾರ್ಟಿ ಮುಗಿದು ಹೊರ ಬಂದಾಗ ಹೇಮಂತ್‌ಗೆ, ಉಮೇಶ್‌ ಬೈದು ಹಲ್ಲೆ ಮಾಡಿದ್ದಾನೆ. ನಂತರ ಕೆಲ ಯುವಕರನ್ನು ಸ್ಥಳಕ್ಕೆ ಕರೆಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆಗಾಗಲೇ ಪಬ್‌ನವರು ಜ್ಞಾನಭಾರತಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಲಾಟೆಯನ್ನು ತಡೆದಿದ್ದಾರೆ. ಉಮೇಶ್‌ ವಿರುದ್ಧ ಹೇಮಂತ್ ಮತ್ತು ಈತನ ಜತೆಗಿದ್ದ ಯುವತಿ ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಉಮೇಶ್‌ ಕೂಡ ಪ್ರತಿದೂರು ನೀಡಿದ್ದಾರೆ. ಈ ಘಟನೆಯ ಬಗ್ಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.