ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ದೇಶವು ಅತ್ಯಂತ ವೈವಿಧ್ಯಮಯ ಹಾಗೂ ಶ್ರೇಷ್ಠ ಜೀವನಶೈಲಿಯ ಪರಂಪರೆ ಹೊಂದಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಧನಂಜಯ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಮತ್ತು ಅಮೇರಿಕಾದಲ್ಲಿನ ಜೀವನಶೈಲಿ ವಿಷಯ ಕುರಿತು ಮಾತನಾಡಿ, ವಿದೇಶದಲ್ಲಿ ಆರೋಗ್ಯ, ಶಿಕ್ಷಣ ಸೌಲಭ್ಯಗಳು ವಿಭಿನ್ನವಾಗಿ ಗುಣಮಟ್ಟ ಹೊಂದಿವೆ. ಭಾರತ ದೇಶದಲ್ಲಿ ವಿವಿಧ ಸೌಕರ್ಯಗಳ ಕೊರತೆ ಇದೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ನಮ್ಮ ಭಾರತ ದೇಶದ ಸಂಸ್ಕೃತಿ ಎಲ್ಲ ದೇಶಗಳಿಗಿಂತ ತುಂಬಾ ಪವಿತ್ರವಾದದ್ದು ಹಾಗೂ ವೈವಿಧ್ಯತೆಯಿಂದ ಕೂಡಿದೆ. ನಮ್ಮ ದೇಶದಲ್ಲಿ ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ, ಸಂಸ್ಕಾರ ಇದೆ ಎಂದು ಹೇಳಿದರು.
ಮಾನವೀಯತೆಯಿಂದ ಬದುಕು ಸಾಗಿಸಲು ನಮ್ಮ ದೇಶ ಸುಸಂಸ್ಕೃತವಾಗಿದೆ. ಬೇರೆ ಬೇರೆ ದೇಶಗಳಂತೆ ಹೆದರುವಂತಹ ಪರಿಸ್ಥಿತಿ ನಮ್ಮ ದೇಶಕ್ಕೆ ಇಲ್ಲ. ನಮ್ಮ ದೇಶವನ್ನು ಪ್ರೀತಿಸಿ ಗೌರವಿಸೋಣ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಧನಂಜಯ ಅವರಿಗೆ ಸನ್ಮಾನಿಸಿ ಗೌರವಿಸಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಶ್ರೀಕಾಂತ್, ಮಹೇಶ್, ಅರುಣ್ ದಿಕ್ಷಿತ್, ಶಶಿಕಾಂತ್ ನಾಡಿಗ್, ಚಂದ್ರಶೇಖರಯ್ಯ, ಡಾ. ಪರಮೇಶ್ವರ್ ಶಿಗ್ಗಾವ್, ಡಾ. ಅರುಣ್, ಆದಿಮೂರ್ತಿ, ಕಾರ್ಯದರ್ಶಿ ಕಿಶೋರ್, ರಮೇಶ್ ಭಟ್, ಮುಕುಂದ ಗೌಡ, ರಾಮಚಂದ್ರ ರಾವ್, ಧರಣೇಂದ್ರ ದಿನಕರ್, ರೋಟರಿ ಸದಸ್ಯರು, ಇನ್ನರ್ ವೀಲ್ ಸದಸ್ಯರು ಭಾಗವಹಿಸಿದ್ದರು.