ಸಾರಾಂಶ
ಕುಣಿಗಲ್ : ಈ ಹಿಂದೆ ವಿಶ್ವದಲ್ಲಿ ಆರ್ಥಿಕ ಹಿಂಜರಿಕೆ ಆದಾಗ ವಿವಿಧ ದೇಶಗಳು ನಷ್ಟ ಹಾಗೂ ಹಿನ್ನಡೆ ಅನುಭವಿಸಿದವು ಆದರೆ ಭಾರತ ಅದೆಲ್ಲವನ್ನು ಮೆಟ್ಟಿ ನಿಂತು ಇಂದು ವಿಶ್ವದಲ್ಲಿ ಗುರುತಿಸಿಕೊಂಡಿದೆ ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷ್ಣಕುಮಾರ್ ಅವರಿಗೆ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಗ್ರಾಮೀಣ ಪ್ರದೇಶ ಹೆಚ್ಚು ಇದ್ದು ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಸೇರಿದಂತೆ ಇತರ ಕೃಷಿ ಆಧರಿತ ಉಪ ಕೆಲಸಗಳನ್ನು ನಂಬಿಕೊಂಡಿದ್ದಾರೆ. ಇದರಿಂದಾಗಿ ಆಂತರಿಕವಾಗಿ ಹಣದ ಹರಿವು ಇದ್ದು ಭಾರತ ಸದೃಢವಾಗಿದೆ ಎಂದರು.
ಹಾಲು ಉತ್ಪಾದಕರು ಆರ್ಥಿಕವಾಗಿ ಅದರಲ್ಲೂ ಮಹಿಳೆಯರು ವಿಶೇಷವಾಗಿ ಸ್ವಾವಲಂಬನೆ ಬದುಕನ್ನು ಕೈಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರವು ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಿದೆ. ಈ ನಿಟ್ಟಿನಲ್ಲಿ ಡಿ ಕೃಷ್ಣಕುಮಾರ್ ರಾಜಕೀಯ ಇಚ್ಚಾ ಶಕ್ತಿಯಿಂದ ತಾಲೂಕಿನಲ್ಲಿ ಹೈನುಗಾರಿಕೆಗೆ ಶಕ್ತಿಯನ್ನು ತುಂಬುವ ಮೂಲಕ ಅತಿ ಹೆಚ್ಚು ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿ ಇಲ್ಲಿನ ಜನರ ಆರ್ಥಿಕ ಪ್ರಗತಿಗೆ ಸಹಕರಿಸಿದ್ದಾರೆ ಎಂದು ಶ್ಲಾಘಿಸಿದರು.
ಅಭಿನಂದನೆ ಸ್ವೀಕರಿಸಿ ತುಮುಲ್ ನಿರ್ದೇಶಕ ಡಿ ಕೃಷ್ಣಕುಮಾರ್ ತಾಲೂಕಿನಲ್ಲಿ ಸುಮಾರು ಒಂದುವರೆ ಲಕ್ಷ ಲಿ. ಹಾಲು ಉತ್ಪಾದನೆಯಾಗುತ್ತಿದ್ದು 15000 ಕುಟುಂಬಗಳು ಹಾಲು ಹಾಕುತ್ತಿದ್ದಾರೆ. ಇನ್ನು ಹೆಚ್ಚು ಹಾಲಿನ ಡೈರಿ ತೆರೆಯುವ ಹಂತದಲ್ಲಿದ್ದು ಇದಕ್ಕೆ ಇಲ್ಲಿನ ಶಾಸಕರು ರಾಜಕೀಯ ತರುತ್ತಿದ್ದಾರೆ ಹಾಲು ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ಕುತಂತ್ರ ರಾಜಕೀಯ ಮಾಡಿದರು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವೈಎಚ್ ಹುಚ್ಚಯ್ಯ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಶಿವಣ್ಣ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಎಸ್ ಆರ್ ಗೌಡ ಶಿರಾ, ಶಿವಪ್ರಕಾಶ್ ಚಿಕ್ಕನಾಯಕನಹಳ್ಳಿ ಸಿದ್ದಗಂಗಯ್ಯ ಕೊರಟಗೆರೆ, ಡೈರಿ ವ್ಯವಸ್ಥಾಪಕ ಮಂಜುನಾಥ್, ಗಿರೀಶ್ ಬಿಎಸ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಕೆಎಸ್, ಬುಲೆಟ್ ಜಯರಾಮ್, ಶ್ರೀನಿವಾಸ್ ಗೌಡ, ರಾಮಚಂದ್ರಯ್ಯ,ವಕೀಲ ನಾರಾಯಣಗೌಡ, ದಿಲೀಪ್ ಗೌಡ ದಿನೇಶ್, ಹರೀಶ್ ನಾಯ್ಕ, ತಾಲೂಕು ಹಾಲು ಉತ್ಪಾದಕರ ಅಧ್ಯಕ್ಷ ರಂಗಸ್ವಾಮಿ, ದೀಪು, ಇತರರು ಉಪಸ್ಥಿತರಿದ್ದರು.