ಸಾರಾಂಶ
sogane airport, mp raghavendra, Foggy weather, Flight delay, ರಾತ್ರಿ ವೇಳೆ ವಿಮಾನ ಹಾರಾಟಕ್ಕೂ ಎಲ್ಲ ತಯಾರಿ, shimoga news
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇನ್ನು 25 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಲಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿಗಳು ನಡೆಯುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಮೃತ ಕಾಲದಲ್ಲಿ ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಅವರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಆಗುತ್ತಿದೆ ಎಂದರು.
ಅಧಿವೇಶನದಲ್ಲಿ ಜಿಲ್ಲೆಪರ ಪ್ರಸ್ತಾಪ:ಸಂಸತ್ ಅಧಿವೇಶನ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಯೋಜನೆ ಪ್ರಸ್ತಾಪ ಮಾಡಿದ್ದೇನೆ. ರೈಲ್ವೆ, ಹೈವೇ, ಹಾಗೆಯೇ ನೀರಾವರಿ ಸೌಲಭ್ಯ ಎಲ್ಲವೂ ಕಳೆದ 5 ವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ. ನೀರಾವರಿ ಯೋಜನೆಗೆ ₹2 ಸಾವಿರ ಕೋಟಿ ಹಣ ಬಂದಿದೆ ಎಂದು ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣ ಹಿನ್ನೆಲೆ ವಿಮಾನ ಹಾರಾಟ ವಿಳಂಬವಾಗುತ್ತಿದೆ. ಸರಿಯಾದ ಸಮಯಕ್ಕೆ ವಿಮಾನಗಳು ಬರುತ್ತಿಲ್ಲ. ಹಾಗಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ. ರಾತ್ರಿ ವೇಳೆ ವಿಮಾನ ಹಾರಾಟಕ್ಕೂ ಎಲ್ಲ ತಯಾರಿ ನಡೆಯುತ್ತಿದೆ ಎಂದರು.ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಇಡಲು ರಾಜ್ಯ ಸಂಪುಟದಲ್ಲಿ ಅನುಮೋದನೆ ಮಾಡಲಾಗಿತ್ತು. ಆದರೆ, ಇದೀಗ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ನಿತಿನ್ ಗಡ್ಕರಿ ಅವರಿಗೆ ಆಹ್ವಾನ ನೀಡಿದ್ದೇನೆ. ಜನವರಿ ಮೂರನೇ ವಾರದಲ್ಲಿ ಸಮಯ ಕೊಡುತ್ತೇವೆ ಅಂದಿದ್ದಾರೆ. ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಸಚಿವರಿಗೆ ಭೇಟಿ ಮಾಡಿದ್ದೇನೆ. ಏಪ್ರಿಲ್ ಒಳಗಡೆ ನೆಟ್ವರ್ಕ್ ಟವರ್ಗಳ ಲೋಕಾರ್ಪಣೆ ಆಗಲಿದೆ. ಬರುವ ದಿನಗಳಲ್ಲಿ ಶಿವಮೊಗ್ಗ ಮತ್ತಷ್ಟು ಅಭಿವೃದ್ಧಿ ಆಗಲಿದೆ. ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕರ ಹೆಸರು ನಾಮಕರಣ ಆಗಲಿದೆ ಎಂದು ತಿಳಿಸಿದರು.- - -
-17ಎಸ್ಎಂಜಿಕೆಪಿ02: ಬಿ.ವೈ.ರಾಘವೇಂದ್ರ