ಅಯೋಧ್ಯೆಯಲ್ಲಿ ಭಾರತೀಯ ನಾಗರಿಕತೆ ಪುನರುತ್ಥಾನಗೊಂಡಿದೆ: ಅಜಿತ್ ಹನುಮಕ್ಕನವರ್

| Published : Feb 25 2024, 01:55 AM IST / Updated: Feb 25 2024, 04:29 PM IST

ಸಾರಾಂಶ

ಕೂರ್ಮ ಫೌಂಡೇಷನ್ ಉಡುಪಿ ವತಿಯಿಂದ ಪುರಭವನದಲ್ಲಿ ‘ಆಜಾದ್ ಹಿಂದ್ ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ ನಡೆಯಿತು. ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ಭಾಷಣ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತದ ನಾಗರಿಕತೆಯ ಇತಿಹಾಸದ ಮೇಲೆ ಎಷ್ಟೇ ದಾಳಿ ಮಾಡಿದರೂ, ಅದನ್ನು ಎಷ್ಟೇ ತಿರುಚಿದರೂ ಅದು ನಾಶವಾಗುವುದಿಲ್ಲ, ಅದು ಮತ್ತೆ ಪುನರುತ್ಥಾನ ಆಗುತ್ತದೆ, ಅಯೋಧ್ಯೆಯಲ್ಲಿ ಈಗ ಆಗಿರುವುದು ಅದೇ ಎಂದು ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ಹೇಳಿದರು.

ಅವರು ಶನಿವಾರ ಇಲ್ಲಿನ ಪುರಭವನದಲ್ಲಿ ಕೂರ್ಮ ಫೌಂಡೇಷನ್ ಉಡುಪಿ ವತಿಯಿಂದ ಆಯೋಜಿಸಲಾದ ‘ಆಜಾದ್ ಹಿಂದ್ ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದಲ್ಲಿ ಬೇರೆ ಯಾವುದೇ ನಾಗರಿಕತೆ ಉಳಿದಿಲ್ಲ, ಭಾರತದ ನಾಗರಿಕತೆ ಮಾತ್ರ ಉಳಿದಿದೆ. ಅಂತಹ ನಾಗರಿಕತೆಯ ಬಗ್ಗೆ ನಮಗೆ ಅಭಿಮಾನ ಇಲ್ಲದಿದ್ದರೇ ಅದು ಮಾನಸಿಕ ದಿವಾಳಿತನ ಅಲ್ಲದೇ ಬೇರೆನೂ ಅಲ್ಲ ಎಂದ ಅವರು, ನಮ್ಮ ದೇಶದ ನಾಗರಿಕತೆ ಯಾವತ್ತೂ ನಾಶ ಆಗುವುದಿಲ್ಲ, ಮತ್ತೆ ಸಾವಿರಾರು ವರ್ಷ ಉಳಿಯುತ್ತದೆ ಎಂದು ರಾಮಮಂದಿರದ ಪುನಃನಿರ್ಮಾಣ ತೋರಿಸಿಕೊಟ್ಟಿದೆ ಎಂದರು.

ಭಾರತಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟು ಹೋಗಿದ್ದಲ್ಲ, ಭಾರತವನ್ನು ಅವರು ಬಿಟ್ಟು ಹೋಗುವಂತೆ ಮಾಡಲಾಯಿತು. ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬಂದಿದ್ದಾದರೇ ಅದಕ್ಕೆ ಮೊದಲು ಹರಿದ ರಕ್ತಕ್ಕೆ ಬೆಲೆಯ ಇಲ್ಲವೇ ಎಂದವರು ಪ್ರಶ್ನಿಸಿದರು.

ಅಂದು ಬ್ರಿಟೀಷರು ಭಾರತದಿಂದ ಹೋಗುವಾಗ ಇವರು ದೇಶವನ್ನು ಹೇಗೆ ಆಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರಂತೆ, ಇಂದು ಭಾರತದ ಸ್ವಾತಂತ್ರ್ಯದ 75 ವರ್ಷ ಆಚರಿಸುವಾಗ ಅದೇ ಬ್ರಿಟನನ್ನು ಭಾರತೀಯನೊಬ್ಬ ಆಳುತ್ತಿದ್ದಾನೆ. 

ಇದು ಭಾರತದ ಶಕ್ತಿ ಎಂದರು.ರಷ್ಯಾ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ವಿದೇಶಿ ವಿದ್ಯಾರ್ಥಿಗಳು ನಮ್ಮ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸುರಕ್ಷಿತವಾಗಿ ಹೊರಗೆ ಹೋಗಿದ್ದರು. 

ಯುರೋಪಿನ ದೇಶಗಳು ನಿಧಾನವಾಗಿ ಕುಸಿಯುತ್ತಿವೆ. ಆದರೆ ಭಾರತ ಮಾತ್ರ ಇನ್ನೂ ಗಟ್ಟಿಯಾಗಿ ಎದ್ದು ನಿಲ್ಲುತ್ತಿದೆ, ಭಾರತದ ನಾಗರಿಕತೆಯ ಭವ್ಯತೆಯ ಸಮಯ ಬಂದಿದೆ ಎಂದವರು ಹೇಳಿದರು.

ಇದೇ ಸಂದರ್ಭ ಮಾತನಾಡಿದ ವಾರಣಾಸಿಯ ಮಹಿಂದ್ ಸಂದೀಪ್ ಗುರೂಜಿ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅರ್ಥ ಮಾಡಿಕೊಂಡು, ಅದರಂತೆ ನಮ್ಮ ಸ್ವಯಂ ಸಿದ್ಧ ಮಾಡಿಕೊಂಡರೆ ಮತ್ತೆಂದೂ ನಾವು ದಾಸ್ಯಕ್ಕೆ ಸಿಲುಕುವುದಿಲ್ಲ ಎಂದರು.

ಸ್ವಾತಂತ್ರ್ಯ ಪುಕ್ಕಟೆಯಾಗಿ ಸಿಗುವುದಿಲ್ಲ, ಬಲ ಇದ್ದವರಿಗೆ ಸಿಗುತ್ತದೆ. ಅದನ್ನು ಶಿವಾಜಿ ಮತ್ತು ನೇತಾಜಿ ತೋರಿಸಿಕೊಟ್ಟಿದ್ದಾರೆ. ಅವರು ಕನಸು ಕಂಡಿದ್ದ ಸ್ವರಾಜ್ಯ ಈಗ ನನಸಾಗುತ್ತಿದೆ, ಮುಂದೆ ರಾಮರಾಜ್ಯದ ಕನಸು ನನಸಾಗಬೇಕಾಗಿದೆ ಎಂದರು.

ಉದ್ಯಮಿ ಅಜಯ್ ಪಿ. ಶೆಟ್ಟಿ ವೇದಿಕೆಯಲ್ಲಿದ್ದರು. ಕೂರ್ಮ ಫೌಂಡೇಶನ್ ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಸ್ವಾಗತಿಸಿದರು.ಸಭಾ ಕಾರ್ಯಕ್ರಮಕ್ಕೆ ಮೊದಲು ಖ್ಯಾತ ಗಾಯಕ ರಜತ್ ಮಯ್ಯ ಮತ್ತು ತಂಡದವರಿಂದ ರಾಷ್ಟ್ರಭಕ್ತಿ ಗೀತೆಗಳು ‘ಸ್ವರಭಾರತಿ’ ಮತ್ತು ಮಂಜರಿಚಂದ್ರ ಮತ್ತು ತಂಡದ ಕಲಾವಿದರಿಂದ ‘ನಮೋ ನಮೋ ಭಾರತಾಂಬೆ’ ‘ಸ್ವರಾಜ್ಯಾಭಿಷೇಕಂ’ ‘ಅಬಾದ್ ರಹೇ ತು’ ನೃತ್ಯ ರೂಪಕಗಳು ಪ್ರಸ್ತುತಗೊಂಡವು.