ಕನ್ನಡಪ್ರಭ ವಾರ್ತೆ ಕುಣಿಗಲ್
ಕುಣಿಗಲ್ನಲ್ಲಿ ಮಲ ಹೊರುವ ಪದ್ದತಿ ಪರೋಕ್ಷವಾಗಿ ಜೀವಂತವಾಗಿದ್ದು ಇದು ಮುಂದುವರೆದರೆ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯಸಪಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ ರಘು ಎಚ್ಚರಿಕೆ ನೀಡಿದರು.ಕುಣಿಗಲ್ ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಕರೆದಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಸಂಪೂರ್ಣವಾಗಿ ಮಂದಗತಿಯಿಂದ ಸಾಗಿದ್ದು ಬಹುತೇಕ ಮನೆಗಳು ಕಟ್ಟಡಗಳು ಸೇರಿದಂತೆ ಇತರ ಸ್ಥಳಗಳಿಂದ ಶೌಚವನ್ನು ಚರಂಡಿಗೆ ಬಿಡುತ್ತಾರೆ ಅದನ್ನು ಪುನಃ ಪೌರಕಾರ್ಮಿಕರು ಸ್ವಚ್ಛಗೊಳಿಸುವ ಉದ್ದೇಶದಿಂದ ತಲೆಯ ಮೇಲೆ ಹೊತ್ತು ಟ್ರ್ಯಾಕ್ಟರ್ ಗಳಿಗೆ ತುಂಬುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಮಲಹೊರುವ ಪದ್ಧತಿ ಇಲ್ಲಿ ಜೀವಂತವಾಗಿದೆ ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಆಯೋಗದ ಅಧ್ಯಕ್ಷರಿಗೆ ನೀಡಿದ ದೂರಿನ ಸಂಬಂಧ ಸಭೆಯಲ್ಲಿ ಪೌರಕಾರ್ಮಿಕರನ್ನು ಅಧ್ಯಕ್ಷರು ಕೇಳಿದಾಗ ಅವರು ಪ್ರತಿದಿನ ನಾವು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಅದು ನಮ್ಮ ಕರ್ತವ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಕಾಮಗಾರಿಯ ಬಗ್ಗೆ ವರದಿ ಹಾಗೂ ಗುತ್ತಿಗೆದಾರನಿಗೆ ನೋಟಿಸ್ ನೀಡುವಂತೆ ಯಂತ್ರಗಳ ಮುಖಾಂತರ ಸ್ವಚ್ಛಗೊಳಿಸುವಂತೆ ಕಾರ್ಮಿಕರಿಗೆ ಉಪಕರಣಗಳು ಸೇರಿದಂತೆ ರಕ್ಷಾ ಕವಚಗಳನ್ನು ನೀಡಬೇಕೆಂದು ತಾಕೀತು ಮಾಡಿ ತಕ್ಷಣ ಇದರ ಬಗ್ಗೆ ನೋಟಿಸ್ ನೀಡಿ ಕ್ರಮ ಜರುಗಿಸದಿದ್ದರೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.ಬಹುತೇಕ ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಅಥವಾ ಹೆಲ್ತ್ ಕಾರ್ಡ್ ಇಲ್ಲದ ಕಾರಣದಿಂದ ಅವರು ಅನಾರೋಗ್ಯ ಸಂದರ್ಭದಲ್ಲಿ ಲಕ್ಷಾಂತರ ರುಪಾಯಿಗಳನ್ನು ಆಸ್ಪತ್ರೆಗೆ ಕಟ್ಟಬೇಕಾಗಿದೆ ಅಧಿಕಾರಿಗಳ ನಿರ್ಲಕ್ಷತೆಯಿಂದ ಈ ಕ್ರಮ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಬಹುತೇಕ ಪೌರಕಾರ್ಮಿಕರಿಗೆ ಈಎಸ್ಐ ಪಿಎಫ್ ಇಲ್ಲದೆ ಇರುವುದರಿಂದ ಅವರಿಗೆ ತೊಂದರೆ ಆಗುತ್ತಿದೆ ಎಂದು ಗುತ್ತಿಗೆದಾರನನ್ನು ಕರೆಸಿ ತಕ್ಷಣ ಅವರ ಬಾಬ್ತು ಇಎಸ್ಐ ಪಿಎಫ್ ಹಣವನ್ನು ಪಾವತಿಸುವಂತೆ ಇಲ್ಲದಿದ್ದರೆ ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯ ಅಧಿಕಾರಿ ಕೃಷ್ಣಪ್ಪ, ಪರಿಸರ ಇಂಜಿನಿಯರ್ ಚಂದ್ರಶೇಖರ್, ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.