ಹೆಚ್ಚಾದ ಪಕ್ಷಾಂತರ ಪರ್ವ-ಕೈನೆಡೆ ಒಲವು : ಮೈತ್ರಿ ಪಡೆಗೆ ಆಘಾತ

| Published : Apr 18 2024, 02:24 AM IST / Updated: Apr 18 2024, 01:19 PM IST

ಹೆಚ್ಚಾದ ಪಕ್ಷಾಂತರ ಪರ್ವ-ಕೈನೆಡೆ ಒಲವು : ಮೈತ್ರಿ ಪಡೆಗೆ ಆಘಾತ
Share this Article
  • FB
  • TW
  • Linkdin
  • Email

ಸಾರಾಂಶ

ಈ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದು ನಿಶ್ಚಿತ, ಎನ್ ಡಿಎ ಅಭ್ಯರ್ಥಿ ಸುಧಾಕರ್‌ಗೆ ಕ್ಷೇತ್ರದ ಜನತೆ ಸೋಲಿಸಿ ಬುದ್ದಿ ಕಲಿಸಲಿದ್ದಾರೆ.

 ದಾಬಸ್‌ಪೇಟೆ : ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿದ್ದು, ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಪ್ರಭಾವಿ ಮುಖಂಡರೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಮೈತ್ರಿ ಪಕ್ಷಕ್ಕೆ ಭಾರಿ ಆಘಾತವನ್ನುಂಟು ಮಾಡಿದೆ.

ಜೆಡಿಎಸ್ ಪ್ರಭಾವಿ ಮುಖಂಡರಾದ ತ್ಯಾಮಗೊಂಡ್ಲು ಹೋಬಳಿಯ ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ, ಸೋಲದೇವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ, ನಿವೃತ್ತ ಇಒ ಹನುಮಂತರಾಯಪ್ಪ, ಮಾಜಿ ಸದಸ್ಯ ಮೋಹನ್‌ ಕುಮಾರ್ ಟಿ.ಎಸ್, ನಗರಸಭೆ ಸದಸ್ಯ ನರಸಿಂಹಮೂರ್ತಿ ಸೇರಿ ಅನೇಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಎನ್. ಶ್ರೀನಿವಾಸ್, ಮಾಜಿ ಎಂಎಲ್‌ಸಿ ಕಾಂತರಾಜು, ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಜನ ನನಗೆ 32 ಸಾವಿರ ಮತಗಳ ಅಂತರದ ಗೆಲುವು ನೀಡಿದ್ದು, ಆದರಂತೆ 1 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಯಾವ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲೆ ದೂರು, ಎಫ್‌ಐಆರ್ ಮಾಡುವ ಕೆಲಸ ಮಾಡಿಲ್ಲ. ಯಾವ ಪೊಲೀಸ್ ಠಾಣೆಯಲ್ಲಿಯೂ ಸಹ ವಿಚಾರಿಸಿಕೊಳ್ಳಬಹುದು. ಅವರು ಮಾಡಿಕೊಂಡಿರುವ ತಪ್ಪಿಗೆ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಗೆ ಮೊದಲು ಇದೇ ರೀತಿ ಮಾಡಿದ್ದರು. ಈಗ ಬೇರೆ ಏನು ಸಿಗಲಿಲ್ಲ ಎಂದು ಮತ್ತೊಂದು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಇವರು ಅಪಪ್ರಚಾರ ಮಾಡುತ್ತಲೇ ಇರಲಿ, ಜೆಡಿಎಸ್ ಪ್ರಭಾವಿ ಮುಖಂಡರು ನಮ್ಮ ಅಭಿವೃದ್ಧಿ ಕೆಲಸ ನೋಡಿ ಕಾಂಗ್ರೆಸ್‌ಗೆ ಬರುತ್ತಲೇ ಇರುತ್ತಾರೆ ಎಂದರು.

ಕೈ ಅಭ್ಯರ್ಥಿ ರಕ್ಷ ರಾಮಯ್ಯ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದು ನಿಶ್ಚಿತ, ಎನ್ ಡಿಎ ಅಭ್ಯರ್ಥಿ ಸುಧಾಕರ್‌ಗೆ ಕ್ಷೇತ್ರದ ಜನತೆ ಸೋಲಿಸಿ ಬುದ್ದಿ ಕಲಿಸಲಿದ್ದಾರೆ ಎಂದರು.

ಮಾಜಿ ಎಂಎಲ್‌ಸಿ ಕಾಂತರಾಜು ಮಾತನಾಡಿದರು. ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ನಾಗರಾಜು, ಜಗದೀಶ್, ಗ್ರಾಪಂ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.