ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡದೇ ಅನ್ಯಾಯ: ಎಚ್‌.ಕೆ.ಮೂರ್ತಿ ಆರೋಪ

| Published : Mar 17 2024, 01:46 AM IST

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡದೇ ಅನ್ಯಾಯ: ಎಚ್‌.ಕೆ.ಮೂರ್ತಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನಲ್ಲಿ ನಾಮ ನಿರ್ದೇಶನದ ಮೂಲಕ ನಾಮ ನಿರ್ದೇಶಿತ ಸದಸ್ಯರ ನೇಮಕ ಮಾಡಿ, ಆದೇಶ ಹೊರಡಿಸಿದೆ. ಐವರು ನಾಮ ನಿರ್ದೇಶಿತ ಸದಸ್ಯರಲ್ಲಿ ಒಬ್ಬರು ಎಸ್ಸಿ, ಓರ್ವ ಎಸ್ಟಿ, ಮೂವರು ಸಾಮಾನ್ಯ ವರ್ಗಕ್ಕೆ ಸೇರಿದ ಪುರುಷ-ಮಹಿಳೆಯರನ್ನು ಆಯ್ಕೆ ಮಾಡಬೇಕೆಂಬ ನಿಯಮವೇ ಇದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಆಶ್ರಯ ಸಮಿತಿಗಳಲ್ಲಿ ನಾಮ ನಿರ್ದೇಶನದ ಮೂಲಕ ನಾಮಿನಿ ಸದಸ್ಯರ ನೇಮಿಸುವಾಗ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡದೇ, ಅನ್ಯಾಯ ಮಾಡಲಾಗುತ್ತಿದೆ ಎಂದು ಹರ್ಷಿ ವಾಲ್ಮೀಕಿ ನಾಯಕ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ಮೂರ್ತಿ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನಲ್ಲಿ ನಾಮ ನಿರ್ದೇಶನದ ಮೂಲಕ ನಾಮ ನಿರ್ದೇಶಿತ ಸದಸ್ಯರ ನೇಮಕ ಮಾಡಿ, ಆದೇಶ ಹೊರಡಿಸಿದೆ. ಐವರು ನಾಮ ನಿರ್ದೇಶಿತ ಸದಸ್ಯರಲ್ಲಿ ಒಬ್ಬರು ಎಸ್ಸಿ, ಓರ್ವ ಎಸ್ಟಿ, ಮೂವರು ಸಾಮಾನ್ಯ ವರ್ಗಕ್ಕೆ ಸೇರಿದ ಪುರುಷ-ಮಹಿಳೆಯರನ್ನು ಆಯ್ಕೆ ಮಾಡಬೇಕೆಂಬ ನಿಯಮವೇ ಇದೆ. ಆದರೆ, ಇಲಾಖೆಗೆ ಸಂಬಂಧಿಸಿದ ಸರ್ಕಾರದ ಕಾರ್ಯದರ್ಶಿಗಳು ಅಧಿನಿಯಮದ ಕಾನೂನುಗಳನ್ನೆಲ್ಲಾ ಕಸದ ಬುಟ್ಟಿಗೆ ಬಿಸಾಕಿ, ರಾಜಕಾರಣಿಗಳು, ಜನ ಪ್ರತಿನಿಧಿಗಳಿಗೆ ಬೇಕಾದಂತಹವರ ಪಟ್ಟಿ ಮಾಡಿ ನಿಯಮಗಳನ್ನೆಲ್ಲಾ ಗಾಳಿಗೆ ತೂರುತ್ತಿದ್ದಾರೆ ಎಂದರು.

ಸ್ಥಳೀಯ ಜನ ಪ್ರತಿನಿಧಿಗಳು, ನಾಯಕರನ್ನು ಪ್ರಶ್ನಿಸಿದರೆ, ಪಕ್ಷದಲ್ಲಿ ಅಂತಹ ನಿಯಮಗಳೇನೂ ಇಲ್ಲ. ನಮ್ಮ ಪಕ್ಷದ ಹೈಕಮಾಂಡ್ ಯಾರನ್ನು ಬೇಕಾದರೂ ನಾಮಿನಿ ಸದಸ್ಯರಾಗಿ ಮಾಡಬಹುದೆನ್ನುತ್ತಾರೆ. ತಮಗೆ ಬೇಕಾದ ವ್ಯಕ್ತಿಗಳನ್ನೇ ನಾಮ ನಿರ್ದೇಶನ ಮಾಡಿರುವುದಾಗಿ ಜನ ಪ್ರತಿನಿಧಿಗಳು, ನಾಯಕರು ಹೇಳುತ್ತಾರೆ ಎಂದು ದೂರಿದರು.

ಹರಿಹರ ತಾ. ಭಾನುವಳ್ಳಿ ಗ್ರಾಮದಲ್ಲಿ ಈಚೆಗೆ ಶ್ರೀ ರಾಜ ವೀರ ಮದಕರಿ ನಾಯಕ ಮಹಾದ್ವಾರವನ್ನು ಒಂದು ಸಮುದಾಯದ ಒತ್ತಡಕ್ಕೆ ಮಣಿದು, ತೆರವುಗೊಳಿಸಿದ ಜಿಲ್ಲಾಡಳಿತ, ತಾಲೂಕು ಆಡಳಿತದ ಕ್ರಮವನ್ನು ಖಂಡಿಸುತ್ತೇವೆ. ಅದೇ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕವನ್ನೂ ತೆರವುಗೊಳಿಸಲಾಗಿದೆ. ಇನ್ನು 2 ತಿಂಗಳ ಒಳಗಾಗಿ ಮುಂಚಿನಂತೆ ಮಹಾದ್ವಾರ ಹಾಗೂ ವೃತ್ತದ ನಾಮಫಲಕ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸದಿದ್ದರೆ, ತೀವ್ರ ಸ್ವರೂಪದ ಹೋರಾಟ ನಾಯಕ ಸಮಾಜದಿಂದ ಹಮ್ಮಿಕೊಳ್ಳಬೇಕಾದೀತು ಎಂದು ಮೂರ್ತಿ ಎಚ್ಚರಿಸಿದರು.

ಸಮಾಜದ ಮುಖಂಡರಾದ ಎಸ್.ಆರ್.ಮಧುಸೂಧನ, ಮಂಜುನಾಥ, ಪಾರ್ವತಿ ಬೋರಯ್ಯ, ಬಸವರಾಜ ಇತರರು ಇದ್ದರು.

.....