ಸಾರಾಂಶ
ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಓಬಿಸಿಯಲ್ಲಿ ಅನ್ಯಾಯವಾಗುತ್ತಿದ್ದು ಶೀಘ್ರ ಸರ್ಕಾರ ಇದನ್ನು ಸರಿಪಡಿಸಲು ಮುಂದಾಗಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹುನಮಂತನಾಥಸ್ವಾಮೀಜಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಓಬಿಸಿಯಲ್ಲಿ ಅನ್ಯಾಯವಾಗುತ್ತಿದ್ದು ಶೀಘ್ರ ಸರ್ಕಾರ ಇದನ್ನು ಸರಿಪಡಿಸಲು ಮುಂದಾಗಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹುನಮಂತನಾಥಸ್ವಾಮೀಜಿ ಒತ್ತಾಯಿಸಿದರು.ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಸಮುದಾಯ ಭವನದಲ್ಲಿ ವಿಶ್ವ ಕುಂಚಿಟಿಗ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕುಂಚಿಟಿಗರ ರತ್ನ, ಕುಂಚಶ್ರೀ, ಆದರ್ಶದಂಪತಿ ಪ್ರಶಸ್ತಿ ಪ್ರದಾನ ಹಾಗೂ ಕುಂಚಿಟಿಗರ ಸಮ್ಮಿಲನ ಓಬಿಸಿ ಹಕ್ಕು ಒತ್ತಾಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಈಗಾಗಲೇ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಶ್ರೀಗಳು ಬೇಸರ ವ್ಯಕ್ತಪಡಿಸಿದರು. ನಮ್ಮ ಆಳುವ ಜನಪ್ರತಿನಿಧಿಗಳು ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಎಲ್ಲಾ ಸಮುದಾಯಗಳ ರೀತಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಿಗಬೇಕಾದ ಸೌಲಭ್ಯವನ್ನು ಕಲ್ಪಿಸಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿಧರ ಹಾಲಪ್ಪ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಸಹ ಓಬಿಸಿ ಪಟ್ಟಿಯಿಂದ ಸಮುದಾಯವನ್ನು ಕೈ ಬಿಟ್ಟಿರುವುದು ಹಲವು ಉನ್ನತ ಹುದ್ದೆ ಮತ್ತು ರಾಜಕೀಯದಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಇದಕ್ಕಾಗಿ ನಾವು ಪಕ್ಷಾತೀತವಾಗಿ ಹೋರಾಟ ಮಾಡುವ ಅನಿವಾರ್ಯತೆ ಇದ್ದು ಕುಂಚಿಟಿಗರೆಲ್ಲರೂ ಒಂದುಗೂಡಬೇಕು ಎಂದರು.ಕಾರ್ಯಕ್ರಮದಲ್ಲಿ ಕುಂಚಿಟಿಗರ ರತ್ನ, ಕುಂಚಶ್ರೀ ಹಾಗೂ ಆದರ್ಶದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಕುಂಚಿಟಿಗ ಪರಿಷತ್ ಅಧ್ಯಕ್ಷ ಅಂಜನಪ್ಪ, ನಿವೃತ್ತ ಡಿವೈಎಸ್ಪಿ ರಾಮಾಂಜಿನಪ್ಪ, ಮಡಕಶಿರಾ ತಾಲೂಕು ಕೂಂಚಿಟಿಗರ ಸಂಘದ ಅಧ್ಯಕ್ಷ ಅನಂತರಾಜು, ಮಾಜಿ ಜಿಲ್ಲಾ ಪಂಚಾಯಿತಿ ಜಿ.ಆರ್.ಶಿವರಾಮಯ್ಯ, ಮುಖಂಡರುಗಳಾದ ಹನುಮಂತಯ್ಯ, ಹುಚ್ಚಯ್ಯ, ಬಿ.ಟಿ.ರಾಮಚಂದ್ರ, ಭವ್ಯ, ನರಸಿಂಹಮೂರ್ತಿ, ಪೂಜಾರ್ ದೊಡ್ಡರಾಜಪ್ಪ, ತುಂಗೋಟಿರಾಮಣ್ಣ, ಕಸವನಹಳ್ಳಿ ರಮೇಶ್, ರಾಮಣ್ಣ, ಕೊಂಡವಾಡಿ ಕೃಷ್ಣಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.