ಸಾರಾಂಶ
ಪ್ರತಿ ವರ್ಷವೂ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ರೈತರು ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಕೊಳ್ಳಲು ವಿವಿಧ ಕಂಪನಿಗಳು ಪ್ರೇರೇಪಿಸಿವೆ. ಕಾನೂನಾತ್ಮಕ ಕೃಷಿ ಒಪ್ಪಂದ ಏರ್ಪಡಿಸದೆ, ರೈತರಿಗೆ ಬೀಜೋತ್ಪಾದನಾ ಹತ್ತಿ ಬೀಜ ನೀಡಿ, ಡ್ರಿಪ್ ಸಾಮಾಗ್ರಿ, ಗೊಬ್ಬರ ಮತ್ತು ಕೀಟನಾಶಕ ನೀಡಿ ಬೆಳೆ ಬೆಳೆಯಲು ಹುರಿದುಂಬಿಸಿವೆ.
ಕನಕಗಿರಿ:
ಪ್ರತಿ ವರ್ಷದಂತೆ ಈ ವರ್ಷವೂ ಹತ್ತಿ ಬೀಜೋತ್ಪಾದನೆ ಮಾಡುವ ರೈತರಿಗೆ ಮೋಸ ಮಾಡುತ್ತಿರುವ ಸತ್ಯ, ರಾಶಿ, ಕಾವೇರಿ, ಮೈಕ್ರೋ, ತುಳಸಿ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಪ್ರತಿ ವರ್ಷವೂ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ರೈತರು ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಕೊಳ್ಳಲು ವಿವಿಧ ಕಂಪನಿಗಳು ಪ್ರೇರೇಪಿಸಿವೆ. ಕಾನೂನಾತ್ಮಕ ಕೃಷಿ ಒಪ್ಪಂದ ಏರ್ಪಡಿಸದೆ, ರೈತರಿಗೆ ಬೀಜೋತ್ಪಾದನಾ ಹತ್ತಿ ಬೀಜ ನೀಡಿ, ಡ್ರಿಪ್ ಸಾಮಾಗ್ರಿ, ಗೊಬ್ಬರ ಮತ್ತು ಕೀಟನಾಶಕ ನೀಡಿ ಬೆಳೆ ಬೆಳೆಯಲು ಹುರಿದುಂಬಿಸಿವೆ. ದ್ವಿಗುಣ ಆದಾಯದ ಆಸೆ ತೋರಿಸಿ ಬಿಜೋತ್ಪಾದನೆಯಲ್ಲಿ ತೊಡಗಿಸಿರುವ ಕಂಪನಿಗಳು, ಇದೀಗ ಕೇವಲ ಒಂದು ಪ್ಲಾಟಿಗೆ ಒಂದರಿಂದ ಎರಡು ಕ್ವಿಂಟಲ್ ಬೀಜ ತೆಗೆದುಕೊಳ್ಳಲಾಗುವುದು ಎಂದು ಹೇಳುವ ಮೂಲಕ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಈ ಮೇಲ್ಕಾಣಿಸಿದ ಮತ್ತು ಇತರೆ ಕಂಪನಿಗಳ ಮಾಲೀಕರನ್ನು ಹಾಗೂ ರೈತ ಮುಖಂಡರನ್ನು ಒಳಗೊಂಡ ಸಭೆ ಏರ್ಪಡಿಸಿ ಕಂಪನಿಗಳ ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಪ್ರಮುಖರಾದ ಭೀಮನಗೌಡ, ಮರಿಸ್ವಾಮಿ, ಹನುಮೇಶ ಪೂಜಾರಿ, ಬಾಲಪ್ಪ ನಾಡಿಗೇರ, ಯಂಕಣ್ಣ ಕಾಟಾಪೂರ, ಸುಭಾಶ್ಚಂದ್ರ, ರುದ್ರೇಶ, ಹನುಮಂತ ಉಪ್ಪಾರ, ಕನಕಪ್ಪ ಯಾದವ, ಸಿದ್ದು ಕಾರ್ಪಡಿ ಇದ್ದರು.