ಉದ್ಯೋಗ ನೀಡುವಲ್ಲಿ ಕನ್ನಡಿಗರಿಗೆ ಅನ್ಯಾಯ

| Published : Jun 09 2024, 01:31 AM IST / Updated: Jun 09 2024, 01:32 AM IST

ಸಾರಾಂಶ

ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರು ನಾರಾಯಣಗೌಡರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಿದ ಪರಿಣಾಮ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ಕಾಯ್ದೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಹೊರ ರಾಜ್ಯದವರು ಕರ್ನಾಟಕಕ್ಕೆ ಉದ್ಯೋಗಕ್ಕಾಗಿ ವಲಸೆ ಬಂದಿರುವುದರಿಂದ ಕನ್ನಡಿಗರಿಗೆ ಉದ್ಯೋಗದ ವಿಚಾರದಲ್ಲಿ ಬಹುದೊಡ್ಡ ಅನ್ಯಾಯವಾಗುತ್ತಿದ್ದು ಇದರ ವಿರುದ್ದ ಸಂಘಟಿತ ಹೋರಾಟ ನಡೆಸಲು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆಂದು ಕರವೇ ಜಿಲ್ಲಾಧ್ಯಕ್ಷ ಎಂ. ಆರ್.ಲೋಕೇಶ್ ತಿಳಿಸಿದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ೫೮ನೇ ಹುಟ್ಟು ಹಬ್ಬದ ಅಂಗವಾಗಿ ೩೧ವಾರ್ಡ್ ತಿಮ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಲೇಖನಿಗಳನ್ನು ವಿತರಿಸಿ ಮಾತನಾಡಿದರು.

ನಾಮಫಲಕಗಳಲ್ಲಿ ಕನ್ನಡ

ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರು ನಾರಾಯಣಗೌಡರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಿದ ಪರಿಣಾಮ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡದಲ್ಲಿ ಕಡ್ಡಾಯವಾಗಿ ಬಳಸಬೇಕೆಂದು ಕಾಯ್ದೆ ತರುವ ಮೂಲಕ ಆದೇಶ ಮಾಡಿದ್ದು, ಈ ಆದೇಶವು ಕರವೇ ಹೋರಾಟಕ್ಕೆ ಸಂದ ಬಹುದೊಡ್ಡ ಗೆಲುವು ಮತ್ತು ಐತಿಹಾಸಿಕ ದಿನವಾಗಿಯೆಂದರು.

ಎಂಪಿಸಿಎಸ್ ಅಧ್ಯಕ್ಷ ಲಕ್ಷ್ಮರೆಡ್ಡಿ, ಮಾಜಿ ನಗರಸಭಾ ಸದಸ್ಯ ರೆಡ್ದೆಪ್ಪ ಮಾತನಾಡಿ ನಮ್ಮೂರ ಸರ್ಕಾರಿ ಶಾಲೆಯ ಮಕ್ಕಗಳಿಗೆ ಹೆಚ್ಚಿನ ಕಲಿಕಾ ಸಾಮಗ್ರಿಗಳನ್ನು ನೀಡಬೇಕೆಂದರು. ಸಿ.ಆರ್.ಪಿ ಭಾಸ್ಕರ್ ಮಾತನಾಡಿ ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆಯೆಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಅಶ್ವಥಮ್ಮ ಪ್ರಾರ್ಥಿಸಿ ಕರವೇ ತಾಲ್ಲೂಕು ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ಸ್ವಾಗತಿಸಿ ವಂದಿಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷ ಚೊಕ್ಕಹಳ್ಳಿ ದೇವರಾಜ್, ಡಿಪೋ ಶಿವಣ್ಣ, ನಗರ ಘಟಕ ಅಧ್ಯಕ್ಷ ಶಬ್ಬೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಟಿ.ವಿ.ಮಂಜುನಾಥ್, ಮುಖ್ಯ ಶಿಕ್ಷಕಿ ಶೋಭಾ, ಸಹಾ ಶಿಕ್ಷಕಿ ಉಮಾದೇವಿ, ಇಂತಿಯಾಜ್, ಅಂಬರೀಶ್, ಬೀಟರ್ ಮಂಜುನಾಥ್, ಚಂದ್ರಶೇಖರ್, ನಂದೀಶ್ , ಇಂತಿಯಾಜ್, ಎಸ್‌ಡಿಎಂಸಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.