ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ನ್ಯಾಯಗೆರೆ ಗ್ರಾಮದಲ್ಲಿ ವಿಜಯನಗರದ ಶಾಸನ ಪತ್ತೆಯಾಗಿದೆ. ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಮುಖ್ಯಸ್ಥರು ಹಾಗೂ ಪ್ರಾಚಾರ್ಯರಾದ ಡಾ.ಗುರುರಾಜ್ ಪ್ರಭು.ಕೆ ಇವರ ಮಾರ್ಗದರ್ಶನದಲ್ಲಿ ಮಹಾಲಿಂಗೇಗೌಡ.ಜಿ ಸಂಶೋಧನಾ ವಿದ್ಯಾರ್ಥಿ ಇವರು ಸಂಶೋಧನಾ ಕ್ಷೇತ್ರ ಕಾರ್ಯ ಕೈಗೊಂಡಾಗ ನ್ಯಾಯಗೆರೆ ಕೆರೆ ಏರಿಯ ಪಕ್ಕದಲ್ಲಿ ಶ್ರೀ ದೇವರಾಜಪ್ಪನವರ ಜಮೀನಿನಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಾಸನ ಪತ್ತೆಯಾಗಿದೆ. ಶಾಸನವು ೪ ಅಡಿ ಉದ್ದ ೨ ಅಡಿ ಅಗಲದ ಚಪ್ಪಡಿ ಕಲ್ಲಿನಲ್ಲಿ ಕನ್ನಡ ಭಾಷೆ ಲಿಪಿಯಲ್ಲಿರುವ ೧೪-೧೦-೧೫೨೮ರಲ್ಲಿ ಬರೆಸಿರುವ ಶಿಲಾಶಾನವಾಗಿದೆ. ಇದು ಕೃಷ್ಣದೇವರಾಯನ ಕಾಲಕ್ಕೆ ಸೇರಿದ್ದು ಇದರಲ್ಲಿ ಶ್ರೀ ತೊಂಟಿಲಗೌಡನು ಮೂಗೆಗೆರೆ (ಮೂಗನಹಳ್ಳಿ) ಪ್ರತಿನಾಮವಾಗಿ ಚೆನ್ನಾಪುರ ಎಂಬ ಸರ್ವಮಾನ್ಯದ ಅಗ್ರಹಾರವಾದ ಇಲ್ಲಿನ ಕೆರೆಯನ್ನು ಕಟ್ಟಿಸಿದ್ದು ಮೂಗನಹಳ್ಳಿಯ ಕಂನಪ್ಪನು ತಮ್ಮ ತಂದೆ ಜುಂಜಗೌಡ ಬೊಮ್ಮಗೌಡರಿಗೆ ಧರ್ಮಾರ್ಥವಾಗಿ ಹಾಕಿಸಿದ ಶಾಸನ. ಇದು ತಿಮ್ಮರಸ ಮತ್ತು ಮಾದರಸ ಹೆಸರಿನಲ್ಲಿ ದಾನ ನೀಡಿದ್ದಾನೆ ಎಂಬ ಉಲ್ಲೇಖವಿದೆ.