ಕಸಾಪ ಕಟ್ಟಡ ನಿರ್ಮಾಣ ಅನುದಾನ ಮಂಜೂರಾತಿಗೆ ಒತ್ತಾಯ

| Published : Nov 07 2024, 12:42 AM IST

ಸಾರಾಂಶ

ಹೊನ್ನಾಳಿ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾತಿಗಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜನ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಮಂಜೂರು ಮಾಡಿಸಿಕೊಡಬೇಕೆಂದು ಕಸಾಪ ಪದಾಧಿಕಾರಿಗಳು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.

ಹರಿಹರದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಸಂಸದರಿಗೆ ಕಸಾಪ ಕಟ್ಟಡಕ್ಕೆ ಅನುದಾನ ಮಂಜೂರು ಮಾಡುವಂತೆ ವಿನಂತಿಸಿಕೊಂಡರು.

ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗಾಗಿ ಹಿರೇಕಲ್ಮಠದ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಯವರು ನಿವೇಶನವನ್ನು ದಾನವಾಗಿ ನೀಡಿದ್ದು, ನಂತರ ಸ್ಥಳೀಯರ ನೆರವಿನಿಂದ ಬುನಾದಿ ಹಾಕಲಾಗಿದೆ. ಕಟ್ಟಡಕ್ಕಾಗಿ ಅನುದಾನ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಜಿಲ್ಲೆ ಹಾಗೂ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಗೂ ಕೂಡ ಸ್ಥಳೀಯ ಶಾಸಕ ಡಿ.ಜಿ.ಶಾಂತನಗೌಡರ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಸಾಪದ ಅಧ್ಯಕ್ಷ ಮುರುಗೇಪ್ಪ ಗೌಡ ಅವರು ಸಂಸದರಿಗೆ ವಿವರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರಾಜ್ಯದ ಅನುದಾನದ ಕುರಿತು ಚರ್ಚಿಸಿ ಕೇಂದ್ರದ ವತಿಯಿಂದ ಇರಬಹುದಾದ ಅವಕಾಶಗಳ ಬಗ್ಗೆ ಪರಿಶೀಲಿಸಿ, ಅನುದಾನ ಮಂಜೂರಾತಿ ಕುರಿತು ಕ್ರಮವಹಿಸುವ ಭರವಸೆ ನೀಡಿದರು.

ತಾಲೂಕಿನ ವಿವಿಧ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಕಟ್ಟಡ ನಿಧಿಯನ್ನು ಸಂಗ್ರಹಿಸುವ ಕೆಲಸವನ್ನು ಕಸಾಪ ಪದಾಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಕಾಸಪ ತಾಲೂಕು ಅಧ್ಯಕ್ಷ ಮುರುಗೆಪ್ಪಗೌಡ, ಉಪಾಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಶೇಖರಪ್ಪ, ಖಜಾಂಚಿ ನಿಜಲಿಂಗಪ್ಪ, ಮಾಜಿ ಅಧ್ಯಕ್ಷ ಎಂ.ಎಸ್.ರೇವಣಪ್ಪ, ಪದಾಧಿಕಾರಿಗಳಾದ ಸುನಂದ, ರಾಜು, ಹಾಲಸಿದ್ದಪ್ಪ ಮುಂತಾದವರು ಇದ್ದರು.