ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಹಾಸನ ಕೃಷಿ ನಿರ್ದೇಶಕರ ಕಚೇರಿ ಕೃಷಿ ಇಲಾಖೆ ಜಾಗೃತಕೋಶ ತಂಡದಿಂದ ತಾಲೂಕಿನ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ತಪಾಸಣೆ ಹಾಗೂ ದಾಳಿ ನಡೆಸಿ ಕಾನೂನುಬಾಹಿರವಾಗಿ ನಡೆಸುವ ಅಂಗಡಿಗಳು ಹಾಗೂ ಅನುಮತಿ ಪಡೆಯದೆ ಬಿತ್ತನೆ ಬೀಜ ಮಾರಾಟ ಸೇರಿದಂತೆ ಕಳಪೆ ಕೃಷಿ ಪರಿಕರಗಳು, ಕ್ರಿಮಿಕೀಟನಾಶಕಗಳ ಅನಧಿಕೃತ ಮಾರಾಟದ ಬಗ್ಗೆ ೧೯೫೫ ಕಾಯ್ದೆ ಅನ್ವಯದಂತೆ ಕ್ರಮಕೈಗೊಳ್ಳುವ ಜೊತೆಗೆ ಎಚ್ಚರಿಕೆ ನೀಡಿದರು.ಹಾಸನದ ಜಂಟಿಕೃಷಿ ನಿರ್ದೇಶಕರಾದ ಪಿ.ರಮೇಶ್ ಕುಮಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ತೀರ್ಥಪ್ರಸಾದ್, ಕೃಷಿ ನಿರ್ದೇಶಕ ಡಿ.ಕೆ.ಯೋಗಾನಂದ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಜಾಗೃತಿಕೋಶ ಮಧುಸೂದನ್ ಸೇರಿದಂತೆ ಇನ್ನು ಮುಂತಾದವರು ತಾಲೂಕಿನ ಹಳೇಬೀಡು, ಮಾದೀಹಳ್ಳಿ ಹೋಬಳಿ ಸೇರಿದಂತೆ ವಿವಿಧೆಡೆಯಲ್ಲಿನ ಕೃಷಿ ಪರಿಕರಣ( ಆಗ್ರೋ ಕೇಂದ್ರಗಳಿಗೆ) ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಅಂದಲೆ ಸಮೀಪದ ರಾಮಚಂದ್ರಪುರ ಗ್ರಾಮದ ಸಿದ್ದೇಗೌಡ ಬಿನ್ ದೇವೇಗೌಡವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಹೈಬ್ರಿಡ್ ಹೈಟೆಕ್ ಮುಸುಕಿಜೋಳ ಬಿತ್ತನೆಬೀಜ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಾಗೃತಿದಳ ಮತ್ತು ಜಾರಿದಳದಿಂದ ದಾಳಿ ನಡೆಸಿ ಮುಸುಕಿಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಹಾಸನದ ಜಂಟಿಕೃಷಿ ನಿರ್ದೇಶಕರಾದ ಪಿ.ರಮೇಶಕುಮಾರ್, ಈಗಾಗಲೇ ಮುಂಗಾರು ಹಂಗಾಮು ಉತ್ತಮ ರೀತಿಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಬಿತ್ತನೆಬೀಜ ಸೇರಿದಂತೆ ವಿವಿಧ ಕೃಷಿ ಪರಿಕರಗಳ ಖರೀದಿಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಗುಣಮಟ್ಟಯುಕ್ತದ ಬಿತ್ತನೆಬೀಜಗಳು ಮತ್ತು ಅಗತ್ಯ ಕೃಷಿ ಪರಿಕರಗಳನ್ನು ನೀಡುವುದು ಎಲ್ಲಾ ಕೃಷಿ ಪರಿಕರ ಅಂಗಡಿಗಳ ಕರ್ತವ್ಯವಾಗಿದೆ. ಈ ಕಾರಣದಿಂದಲೇ ಇಲ್ಲಿನ ಜಾಗೃತಿದಳ ಮತ್ತು ಜಾಗೃತಿಕೋಶದಿಂದ ಜಿಲ್ಲೆಯ ಮುಂತಾದ ಕಡೆಗಳಲ್ಲಿ ಕೃಷಿ ಪರಿಕರಗಳ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲ ಅಕ್ರಮ ವಸ್ತುಗಳು ಮತ್ತು ಕಳೆಪೆ ಗುಣಮಟ್ಟದ ಕ್ರಿಮಿಕೀಟನಾಶಕಗಳು, ರಸಗೊಬ್ಬರ ಹಾಗೂ ಬಿತ್ತನೆಬೀಜಗಳ ಪರಿಶೀಲನೆ ನಡೆಸಲಾಗಿದೆ ಎಂದರು. ಬೇಲೂರು ತಾಲೂಕಿನ ಮಾದೀಹಳ್ಳಿ ಹೋಬಳಿಯ ಅಂದಲೆ ಗ್ರಾಮದ ರಾಮಚಂದ್ರಪುರ ಗ್ರಾಮದ ಸಿದ್ದೇಗೌಡ ಬಿನ್ ದೇವೇಗೌಡ ಎಂಬವರ ಮನೆಯಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದೆ ಹೈಬ್ರಿಡ್ ಹೈಟಕ್ ಮುಸುಕಿಜೊಳ ಸಂಗ್ರಹಿಸಿದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ, ೨೮೮ ಕೇಜಿ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.