ರಕ್ತದಾನಕ್ಕೆ ಅನ್ಯರಿಗೂ ಪ್ರೇರಣೆ ನೀಡಿ: ಡಿಸಿ ಗಂಗಾಧರ ಸ್ವಾಮಿ

| Published : Jun 21 2025, 12:49 AM IST

ರಕ್ತದಾನಕ್ಕೆ ಅನ್ಯರಿಗೂ ಪ್ರೇರಣೆ ನೀಡಿ: ಡಿಸಿ ಗಂಗಾಧರ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತದಾನ ಮಾಡಲು ಬೇರೆಯವರನ್ನು ಪ್ರೇರೇಪಿಸಿ, ನೀವುಗಳೇ ರಾಯಭಾರಿ ಆಗಬೇಕು ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಕ್ತದಾನ ಮಾಡಲು ಬೇರೆಯವರನ್ನು ಪ್ರೇರೇಪಿಸಿ, ನೀವುಗಳೇ ರಾಯಭಾರಿ ಆಗಬೇಕು ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಲೈಫ್‌ಲೈನ್ ರಕ್ತಕೇಂದ್ರ, ಕರ್ನಾಟಕ ಹಿಮೋಫಿಲಿಯಾ, ಸೊಸೈಟಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿದ್ದ ರಕ್ತ ನೀಡಿ, ಭರವಸೆ ನೀಡಿ ಜೊತೆಯಾಗಿ ನಾವು ಜೀವ ಉಳಿಸೋಣ ಎಂಬ ಘೋಷವಾಕ್ಯದೊಂದಿಗೆ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆ ಜನತೆಗೆ ದೊಡ್ಡ ಗುಣವಿದೆ, ರಕ್ತ ಕೊರತೆಯಾಗದಂತೆ ಹೆಚ್ಚು ರಕ್ತದಾನವನ್ನು ಮಾಡಿದ್ದಾರೆ. ಅಪಘಾತದಿಂದ ಹಾಗೂ ಕಾಯಿಲೆಯಿಂದ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು ಎಂದರು.

ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲ ರಾವ್ ಮಾತನಾಡಿ, ರಕ್ತದಾನ ಎಲ್ಲದಕ್ಕಿಂತಲೂ ಅತಿ ದೊಡ್ಡ ದಾನವಾಗಿದೆ. ಆರೋಗ್ಯವಂತ ವ್ಯಕ್ತಿ ಪ್ರತಿ 3 ತಿಂಗಳಿಗೊಮ್ಮೆ 1 ಬಾರಿಯಾದರೂ ರಕ್ತದಾನ ಮಾಡಿದಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ಹೃದಯ ಸಂಬಂಧಿ ರೋಗಗಳು ಸೇರಿದಂತೆ ವಿವಿಧ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ತಿಳಿಸಿದರು. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ವೀರೇಂದ್ರ ಪ್ರಸಾದ್, ಚಂದ್ರಶೇಖರ್, ನವೀನ್, ಶೋಭಾ ಹಾಗೂ ಸಚ್ಚಿನ್ ನಾಯ್ಕ, ಮಧುಮತಿ, ಪ್ರೇಮಾ ಅವರನ್ನು ಸನ್ಮಾನಿಸಲಾಯಿತು. ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮುಂಭಾಗದಿಂದ ಲೈಫ್‌ಲೈನ್ ರಕ್ತ ನಿಧಿ ಕೇಂದ್ರದವರೆಗೆ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಆರ್‌ಸಿಎಚ್ ಅಧಿಕಾರಿ ರೇಣುಕಾರಾಧ್ಯ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಪಿ.ಡಿ. ಮುರುಳೀಧರ್, ಲೈಫ್ ಲೈನ್ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎಂ.ದೊಡ್ಡಿಕೊಪ್ಪದ್‌ ಇತರರು ಇದ್ದರು.

- - -

-20ಕೆಡಿವಿಜಿ40: ದಾವಣಗೆರೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸಿದರು.