೨೦೨೬-೨೭ನೇ ಸಾಲಿಗೆ ಲಯನ್ಸ್ ಕ್ಲಬ್ ಹಾಸನಾಂಬೆಯ ಅಧ್ಯಕ್ಷರಾಗಿ ಕೆ.ಕೆ. ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಎಂ. ಹರೀಶ್ ಕುಮಾರ್ ಹಾಗೂ ಖಜಾಂಚಿಯಾಗಿ ಧರಣಿ ಎಲ್.ಎಸ್. ಅಧಿಕಾರ ಸ್ವೀಕರಿಸಿದರು. ಲಿಯೋ ಕ್ಲಬ್ ಅಧ್ಯಕ್ಷರಾಗಿ ಕೆ.ಎಂ. ಸೋಹನ್ ಗೌಡ, ಕಾರ್ಯದರ್ಶಿಯಾಗಿ ಶ್ರೇಯಲಾ ಎಚ್. ಹಾಗೂ ಖಜಾಂಚಿಯಾಗಿ ರುತ್ವಿಕ್ ಯು. ಆಚಾರ್ಯ ಅಧಿಕಾರ ವಹಿಸಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ಲಯನ್ಸ್ ಕ್ಲಬ್ ಹಾಸನಾಂಬೆ ಹಾಗೂ ಲಿಯೋ ಕ್ಲಬ್ ಹಾಸನಾಂಬೆಯ ೨೦೨೬- ೨೭ನೇ ಸಾಲಿನ ನೂತನ ಪದಾಧಿಕಾರಿಗಳ ಅನುಸ್ಥಾಪನಾ ಸಮಾರಂಭ ನಗರದ ರವೀಂದ್ರನಗರದ ಕುರುಹಿನ ಶೆಟ್ಟಿ ಕನ್ವೆನ್ಷನ್ ಹಾಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.

ಜಿಲ್ಲಾ ಮಾಜಿ ಗವರ್ನರ್ ಲಯನ್ ಸಂಜೀತ್ ಶೆಟ್ಟಿ ಅವರು ಅನುಸ್ಥಾಪನಾ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಮಾಜಿ ಗವರ್ನರ್ ಡಾ. ಎಚ್.ಎಸ್. ಮಂಜುನಾಥ ಮೂರ್ತಿ ಅವರು ಸಮಾಜಮುಖಿ ಸೇವೆಯ ಮಹತ್ವವನ್ನು ವಿವರಿಸಿ, ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಮಾನವೀಯ ಸೇವೆಯ ಮೂಲಕ ವಿಶೇಷ ಗುರುತನ್ನು ಗಳಿಸಿರುವ ಸಂಘಟನೆಯಾಗಿದ್ದು, ಪ್ರತಿಯೊಬ್ಬ ಸದಸ್ಯರೂ ಸೇವಾಭಾವದಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ ಕೆ.ಕೆ. ಮೋಹನ್ ಕುಮಾರ್ ಹಾಗೂ ಸಂಜೀತ್ ಶೆಟ್ಟಿ, ಎಚ್.ಎಸ್. ಮಂಜುನಾಥ್ ಮೂರ್ತಿ, ಗೌರವ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಜೆ.ಪಿ. ಶೇಖರ್ ಮಾತನಾಡಿ, ಕಳೆದ ಅವಧಿಯಲ್ಲಿ ಕ್ಲಬ್ ಕೈಗೊಂಡ ೧೪೦ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳಿಗೆ ಸದಸ್ಯರ ಸಹಕಾರವೇ ಕಾರಣ ಎಂದು ಹೇಳಿದರು. ಮತ್ತೊಮ್ಮೆ ಅಧ್ಯಕ್ಷರಾಗಿ ಜವಾಬ್ದಾರಿ ನೀಡಿರುವುದು ಇನ್ನಷ್ಟು ಹೊಣೆಗಾರಿಕೆಯನ್ನು ಹೆಚ್ಚಿಸಿದ್ದು, ಈ ವರ್ಷವೂ ಹೊಸ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಎಲ್ಲ ಸದಸ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

೨೨೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಸಂಸ್ಥೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಸೇವೆಯೇ ಸಂಘಟನೆಯ ಮೂಲ ಧ್ಯೇಯವಾಗಿದ್ದು, ಇನ್ನಷ್ಟು ಜನರನ್ನು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

೨೦೨೬-೨೭ನೇ ಸಾಲಿಗೆ ಲಯನ್ಸ್ ಕ್ಲಬ್ ಹಾಸನಾಂಬೆಯ ಅಧ್ಯಕ್ಷರಾಗಿ ಕೆ.ಕೆ. ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಎಂ. ಹರೀಶ್ ಕುಮಾರ್ ಹಾಗೂ ಖಜಾಂಚಿಯಾಗಿ ಧರಣಿ ಎಲ್.ಎಸ್. ಅಧಿಕಾರ ಸ್ವೀಕರಿಸಿದರು. ಲಿಯೋ ಕ್ಲಬ್ ಅಧ್ಯಕ್ಷರಾಗಿ ಕೆ.ಎಂ. ಸೋಹನ್ ಗೌಡ, ಕಾರ್ಯದರ್ಶಿಯಾಗಿ ಶ್ರೇಯಲಾ ಎಚ್. ಹಾಗೂ ಖಜಾಂಚಿಯಾಗಿ ರುತ್ವಿಕ್ ಯು. ಆಚಾರ್ಯ ಅಧಿಕಾರ ವಹಿಸಿಕೊಂಡರು.

ಸ್ಫೂರ್ತಿದಾಯಕ ಹೆಜ್ಜೆಗಳು ಒಟ್ಟಿಗೆ ಸೇವೆ ಮಾಡೋಣ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜಸೇವೆಯ ವಿವಿಧ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಕಲ್ಪವನ್ನು ನೂತನ ತಂಡ ವ್ಯಕ್ತಪಡಿಸಿತು.

ಕಾರ್ಯಕ್ರಮದಲ್ಲಿ ಎಂ.ಎಚ್. ಮಂಜುನಾಥ್, ವಕೀಲರು ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ,ಸನ್ ರೈಸ್ ಅಧ್ಯಕ್ಷ ಕೆ.ಎಸ್. ಯೋಗೇಶ್, ಕರವೇ ರಾಜ್ಯ ಕಾರ್ಯದರ್ಶಿ ಹಾಗೂ ಚೇರ್ ಪರ್ಸನ್ ರಘು ಪಾಳ್ಯ, ಮಾಜಿ ಅಧ್ಯಕ್ಷ ಕೆ.ವಿ. ಯೋಗೀಶ್, ಪ್ರಗತಿಪರ ರೈತರಾದ ಶಿವಣ್ಣ, ಹನುಮಂತೇಗೌಡ, ಮಂಜುನಾಥ್, ಡಿ.ಆರ್. ನಾಗೇಶ್, ಕೇಶವಮೂರ್ತಿ, ಕೃಷ್ಣಮೂರ್ತಿ ಸೇರಿದಂತೆ ಲಯನ್ಸ್ ಮತ್ತು ಲಿಯೋ ಕ್ಲಬ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.