ತುಂಗಭದ್ರಾ ಜಲಾಶಯದ ನೂತನ ಗೇಟುಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಈಗ 5 ಗೇಟುಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ ನಾಯಕ ''ಕನ್ನಡಪ್ರಭ''ಕ್ಕೆ ತಿಳಿಸಿದ್ದಾರೆ.
ಮುನಿರಾಬಾದ್: ತುಂಗಭದ್ರಾ ಜಲಾಶಯದ ನೂತನ ಗೇಟುಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಈಗ 5 ಗೇಟುಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ ನಾಯಕ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಗೇಟ್ ನಂಬರ್ 18ರ ಅಳವಡಿಕೆ ಕಾರ್ಯ ಹಾಗೂ ಅದರ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಈಗ ಗೇಟ್ ನಂಬರ್ 19, 20, 32 ಹಾಗೂ 33 ಅಳವಡಿಕೆ ಕಾರ್ಯವು ಯಶಸ್ವಿಯಾಗಿದೆ ಎಂದರು.ಜಲಾಶಯದ 8 ಗೇಟುಗಳು, ಗೇಟ್ ನಂಬರ್ 1, 4, 11, 17, 24, 26, 27, 28 ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದ್ದು, ಪ್ರತಿನಿತ್ಯ ಒಂದು ಗೇಟ್ ಅಳವಡಿಸಲಾಗುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಇನ್ನು ಎಂಟು ಗೇಟ್ ಅಳವಡಿಕೆ ಕಾರ್ಯ ಮುಗಿಯಲಿದೆ ಎಂದರು.
ಫೆಬ್ರವರಿ ಅಂತ್ಯದ ವೇಳೆಗೆ ಜಲಾಶಯದ 33 ಗೇಟ್ಗಳ ಪೈಕಿ 13 ಗೇಟುಗಳ ಅಳವಡಿಕೆ ಕಾರ್ಯ ಪೂರ್ಣವಾಗಲಿದೆ ಎಂದು ಲಕ್ಷ್ಣಣ ನಾಯಕ ತಿಳಿಸಿದ್ದಾರೆ.23 ನೂತನ ಗೇಟುಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಎರಡು ಗೇಟ್ಗಳು ಸಿದ್ಧತಾ ಹಂತದಲ್ಲಿದೆ. ಜಲಾಶಯದ ನೂತನ ಗೇಟುಗಳನ್ನು ಎರಡು ಕಡೆಗಳಲ್ಲಿ, ಟಿಬಿ ಡ್ಯಾಂ ಹಾಗೂ ಗದಗದಲ್ಲಿ ಸಿದ್ಧಪಡಿಸಲಾಗುತ್ತಿದೆ ಎಂದರು.
ಇನ್ನು ಹಳೆಯ ಗೇಟುಗಳ ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಮುಖ್ಯ ಅಭಿಯಂತರರು, ಇದುವರೆಗೆ 15 ಗೆಟ್ಗಳನ್ನು ತೆರವುಗೊಳಿಸಲಾಗಿದೆ. ಇನ್ನು 5 ಗೇಟುಗಳ (ಗೇಟ್ ಸಂಖ್ಯೆ 3, 5, 21, 25, 26) ತೆರವುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.ಒಂದು ಕಡೆ ಹಳೆಯ ಗೇಟುಗಳ ತೆರವು ಕಾರ್ಯಾಚರಣೆ, ಇನ್ನೊಂದು ಕಡೆ ನೂತನ ಗೇಟುಗಳ ನಿರ್ಮಾಣ, ಮತ್ತೊಂದು ಕಡೆ ನೂತನ ಗೇಟುಗಳ ಅಳವಡಿಕೆ ಕಾರ್ಯ ಇವೆಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.