ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದಂತೆ 19 ಅಡಿ ಎತ್ತರದ ಮುಖ್ಯಪ್ರಾಣ ದೇವರ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ. 31ರಿಂದ ಏ. 2 ರವರೆಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಜರುಗಲಿದೆ.
ಕಾಪು: ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದಂತೆ 19 ಅಡಿ ಎತ್ತರದ ಮುಖ್ಯಪ್ರಾಣ ದೇವರ ಶಿಲಾಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ. 31ರಿಂದ ಏ. 2 ರವರೆಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಜರುಗಲಿದೆ. ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಕಳೆದ 11 ವರ್ಷಗಳಿಂದ ನಿರಂತರ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿವೆ. ಗುರೂಜಿ ಅವರ ಸಂಕಲ್ಪದಂತೆ ಶ್ರೀ ಕ್ಷೇತ್ರದ ಆವರಣದಲ್ಲಿ ಭಕ್ತರ ಸಹಯೋಗದಲ್ಲಿ ಸುಮಾರು 60 ಲಕ್ಷ ರು. ವೆಚ್ಚದಲ್ಲಿ 19 ಅಡಿ ಎತ್ತರದ ಏಕಶಿಲಾ ಶ್ರೀ ಮುಖ್ಯಪ್ರಾಣನ ಮೂರ್ತಿ ಏ. 2ರಂದು ಪ್ರತಿಷ್ಛಾಪನೆಗೊಳ್ಳುತ್ತಿವೆ. ಈ ಮೂರ್ತಿಯನ್ನು ಮಾ. 14ರಂದು ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಗಿದೆ. ಮಾ. 26ರಂದು ಹನುಮ ಜನ್ಮಭೂಮಿಯಿಂದ ರಾಮ ನವಮಿಯಂದು ಹನುಮ ಜ್ಯೋತಿ ಮತ್ತು ಹನುಮ ಧ್ವಜವು ಹೊರಟು ಮಾ. 29ಕ್ಕೆ ಕ್ಷೇತ್ರವನ್ನು ತಲುಪಿದೆ. ಇದೇ ಸಂದರ್ಭ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಯ 200 ಕೆಜಿ ತೂಕದ ಪಂಚಲೋಹ ಮೂರ್ತಿಯನ್ನು ಶ್ರೀ ಕ್ಷೇತ್ರಕ್ಕೆ ತರಲಾಗಿದೆ. ಮಂಗಳವಾರದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಏ. 2ರಂದು ಮೂರ್ತಿ ಸ್ಥಾಪನೆ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಗುರೂಜಿ ತಿಳಿಸಿದ್ದಾರೆ.