ಮಾದರಿ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ
ಕನ್ನಡಪ್ರಭ ವಾರ್ತೆ ಯಲ್ಲಾಪುರಮಕ್ಕಳಿಗೆ ನಿತ್ಯ ಜೀವನದಲ್ಲಿ ಜೀವನ ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯ ಮೌಲ್ಯದ ಅರಿವನ್ನು ಮೂಡಿಸುತ್ತಿರಬೇಕು. ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಒಂದು ಹೊಸ ಚೈತನ್ಯ, ಸ್ಪೂರ್ತಿ ಲಭಿಸುತ್ತದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಹೊಣೆ ಪಾಲಕರ ಮೇಲಿದೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು. ಭಾನುವಾರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ರಂಗಸಹ್ಯಾದ್ರಿ, ಓಂಕಾರ ಯೋಗ ಕೇಂದ್ರ ಮತ್ತು ಮಾದರಿ ಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೨೦ನೇ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಬಹುಮಾನ ವಿತರಿಸಿ ಮಾತನಾಡಿ, ರಂಗ ಸಹ್ಯಾದ್ರಿಯ ಡಿ.ಎನ್.ಗಾಂವ್ಕರ ಒಬ್ಬ ಉತ್ತಮ ಸಂಘಟಕ, ಕಲಾ ತಪಸ್ವಿ ಎಂದರೂ ತಪ್ಪಾಗಲಾರದು. ಅವರ ತಂಡ ಅದ್ಭುತವಾಗಿ ಈ ಪುಟಾಣಿ ಮಕ್ಕಳಿಗೆ ಒಂದು ಹೊಸ ಕಲ್ಪನೆಯನ್ನು ನೀಡಿದೆ ಎಂದರು.
ಶಿಕ್ಷಕ ಸಣ್ಣಪ್ಪ ಭಾಗ್ವತ, ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್. ಗಾಂವ್ಕರ ಮಾತನಾಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ೪ನೇ ರ್ಯಾಂಕ್ ವಿಜೇತೆ ಸಮೃದ್ಧಿ ಸಣ್ಣಪ್ಪ ಭಾಗ್ವತ ಸನ್ಮಾನ ಸ್ವೀಕರಿಸಿ ಅನುಭವ ಹಂಚಿಕೊಂಡಳು. ಶಿಬಿರಾರ್ಥಿಗಳಾದ ನಿಹಿತಾ ಗಣಪತಿ ಬೋಳಗುಡ್ಡೆ, ನಿಧಿ ಸುಬ್ರಾಯ ಪೈ, ಭುವನ ಪಟಗಾರ, ಪ್ರತೀಕ್ಷಾ ಭಟ್ಟ ಅನುಭವ ಹಂಚಿಕೊಂಡರು. ಶಾಲಾ ಎಸ್.ಡಿ.ಎಂ.ಸಿ. ಸದಸ್ಯರಾದ ಗಣೇಶ ಪಂಡರಾಪುರ, ರಾಘವೇಂದ್ರ ತಳೇಕರ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಂ. ತಾಂಡುರಾಯನ್, ಸುಮಂಗಲಾ ಜೋಶಿ, ಪರಮೇಶ್ವರ ನಾಯ್ಕ, ಪಾರ್ವತಿ ಕಟ್ಟಿಮನಿ, ಲಕ್ಷ್ಮೀ ಶಂಕರ ಭಟ್ಟ, ಸೋನು ಭಟ್ಟ, ಸುಬ್ರಾಯ ಭಟ್ಟ, ಗಾಯತ್ರಿ ಬೋಳಗುಡ್ಡೆ ಮುಂತಾದವರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.