ಕೃಷಿ, ರೈತರ ಬಗ್ಗೆ ಮಕ್ಕಳಲ್ಲಿ ಗೌರವಭಾವ ಮೂಡಿಸಿ

| Published : Dec 26 2024, 01:02 AM IST

ಸಾರಾಂಶ

ಇಂದು ಕೂಡು ಕುಟುಂಬಗಳು ಉಳಿದಿದ್ದರೆ, ತಂದೆ ತಾಯಿಗಳು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರೆ ಅದು ರೈತಾಪಿ ಕುಟುಂಬದಲ್ಲಿ ಮಾತ್ರ ಸಾಧ್ಯ

ಮುಂಡರಗಿ: ರೈತರು ಹಾಗೂ ಕೃಷಿ ಬಗ್ಗೆ ಅಸಡ್ಡೆ ತೋರಿದರೆ ಭವಿಷ್ಯದಲ್ಲಿ ಸಂಕಷ್ಟಕ್ಕೆ ಈಡಾಗುತ್ತೇವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಕೃಷಿ ಹಾಗೂ ರೈತರ ಬಗ್ಗೆ ಗೌರವಭಾವ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಹೇಳಿದರು.

ಅವರು ಮಂಗಳವಾರ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇಂದು ಕೂಡು ಕುಟುಂಬಗಳು ಉಳಿದಿದ್ದರೆ, ತಂದೆ ತಾಯಿಗಳು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರೆ ಅದು ರೈತಾಪಿ ಕುಟುಂಬದಲ್ಲಿ ಮಾತ್ರ ಸಾಧ್ಯ ಎಂದರು.

ಶಾಲಾ ಮುಖ್ಯೋಪಾಧ್ಯಯ ಡಾ.ನಿಂಗು ಸೊಲಗಿ, ಮಕ್ಕಳಲ್ಲಿ ಕೃಷಿ ಸಾಧಕರ ಬಗ್ಗೆ ಅಭಿಮಾನ ಮೂಡುವಂತೆ ಪೂರಕ ಬರಹ ಕೊಡುವ ಮೂಲಕ ಕೃಷಿಯ ಬಗ್ಗೆ ತಿಳಿವಳಿಕೆ ನೀಡಲು, ಅಭಿಮಾನ ಮೂಡಿಸಲು ಚಟುವಟಿಕೆ ನೀಡಲಾಗಿತ್ತು. ಆ ಬರಹ ಭಾವಾಭಿನಯದ ಭಾಷಣಗಳನ್ನಾಗಿಸಿಕೊಂಡು ಮಕ್ಕಳು ಸ್ವಯಂ ಸ್ಫೂರ್ತಿಯಿಂದ ರೈತ ದಿನ ಆಚರಣೆಗೆ ಮುಂದಾದ ಕಾರಣ ಶಿಕ್ಷಕರಾಗಿ ನಾವು ಕೈಗೂಡಿಸಿದ್ದೇವೆ. ಪಠ್ಯದ ಓದು ಅನುಭವವಾಗಿ ರೂಪುಗೊಳ್ಳಲು ಇಂಥ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಖುಷಿ ಕಂಡ ನಾಡಿನ ಹತ್ತು ಜನ ಕೃಷಿ ನಾರಿಯರ ಸಾಧನೆ ಕುರಿತು ನಾಲ್ಕನೇ ತರಗತಿಯ ಹದಿಮೂರು ಮಕ್ಕಳು ಮಾತನಾಡಿದರು. ಮಕ್ಕಳಿಂದ ನೇಗಿಲಯೋಗಿ ಹಾಗೂ ಅನ್ನದಾತ ನೃತ್ಯ ರೂಪಕಗಳು ಪ್ರದರ್ಶನಗೊಂಡವು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ಮುಖಂಡ ಚಂದ್ರಪ್ಪ ಗದ್ದಿ, ಬಸವರಾಜ ತಿಗರಿ, ಯಲ್ಲಪ್ಪ ಜಂಬಗಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಕರಾದ ಎಂ.ಆರ್.ಗುಗ್ಗರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಂ. ಲಾಂಡೆ ಸ್ವಾಗತಿಸಿ,ಪಿ.ಆರ್‌.ಗಾಡದ ನಿರೂಪಿಸಿ, ಶಿವಲೀಲಾ ಅಬ್ಬಿಗೇರಿ ವಂದಿಸಿದರು.