ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಸೂಚನೆ

| Published : Aug 03 2025, 01:30 AM IST

ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಪಿಡಿಒಗಳು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಘಟಕಗಳಲ್ಲಿ ಸಮಸ್ಯೆಯಾದರೆ, ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಘಟಕಗಳ ಕಾಲಕಾಲಕ್ಕೆ ಪರಿಶಿಲಿಸಿ, ಶುದ್ಧ ಕುಡಿಯುವ ನೀರು ನೀಡಲು ನಿಗಾ ವಹಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಈಗಾಗಲೇ ಅನೇಕ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದು ತ್ವರಿತವಾಗಿ ಮುಗಿಸಬೇಕು ಎಂದು ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು. ನಗರದ ಜಿಪಂ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ಮನೆಗೂ ಶುದ್ಧ ನೀರು ಸರಬರಾಜು ಮಾಡಲು ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ, ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಶುದ್ಧ ನೀರು ಪೂರೈಸಬೇಕು

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಪಿಡಿಒಗಳು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಘಟಕಗಳಲ್ಲಿ ಸಮಸ್ಯೆಯಾದರೆ, ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಘಟಕಗಳ ಕಾಲಕಾಲಕ್ಕೆ ಪರಿಶಿಲಿಸಿ, ಶುದ್ಧ ಕುಡಿಯುವ ನೀರು ನೀಡಲು ನಿಗಾ ವಹಿಸಬೇಕು. ಸಾರ್ವಜನಿಕರಿಂದ ಇ ಸ್ವತ್ತುಗಳ ಬಗ್ಗೆ ದೂರುಗಳು ಬರುತ್ತಿದ್ದು, ಪಿಡಿಓಗಳು, ನಿಮಯನುಸಾರ ಅರ್ಜಿಗಳನ್ನು ನಿಗದಿಯ ಸಮಯದಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ಗ್ರಾಪಂಗಳಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಸಮುದಾಯ ಇಂಗುಗುಂಡಿ, ಸರಿಯಾದ ರೀತಿಯಲ್ಲಿ ನಿರ್ವಹಣೆ ಯಾಗಬೇಕು, ಪಂಚಾಯತಿ ಸಿಬ್ಬಂದಿ ಈ ಬಗ್ಗೆ ಪರಿಶೀಲಿಸಿ, ಬೂದು ನೀರು ನಿರ್ವಹಣಾ ಕಾಮಗಾರಿಗಳ ಉದ್ದೇಶ ಈಡೇರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಸ್ವಚ್ಛ ಸಂಕೀರ್ಣ ಘಟಕಗಳಿಗೆ ಜಾಗದ ಸಮಸ್ಯೆ ಇರುವ ಬಗ್ಗೆ ಕಾರ್ಯನಿರ್ವಹಕ ಅಧಿಕಾರಿಗಳು, ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಮಹಾತ್ಮ ಗಾಂಧಿ ನರೇಗಾ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಕೂಲಿಕಾರರ ಫೋಟೋಗಳ ಪರಿಶೀಲನೆ ಮಾಡಬೇಕು. ಫೋಟೋಗಳಲ್ಲಿ ಕೆಲ ಲೋಪಗಳು ಕಂಡು ಬರುತ್ತಿದ್ದು, ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪರಿಶೀಲಿಸಾಲಾಗುತ್ತಿದೆ. ಇನ್ನೂ ಮುಂದೆ ಯಾವುದೇ ಲೋಪ ಕಂಡು ಬಂದರೆ ಸರ್ಕಾರದ ನಿರ್ದೇಶನದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ವಿಮಾ ಯೋಜನೆಗಳ ಪ್ರಚಾರಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಬಗ್ಗೆ ಪ್ರಚಾರ ಮಾಡಲು ಸೂಚಿಸಿದರು. ಜೀವ ವಿಮಾ ಯೋಜನೆಯಡಿ ವಾರ್ಷಿಕ ಪ್ರೀಮಿಯಂ ರೂ ೪೩೬ಗೆ, ೨ ಲಕ್ಷದವರೆಗೂ ವಿಮೆ ದೊರೆಯಲಿದೆ. ಅಪಘಾತ ವಿಮಾ ಯೋಜನೆಯಡಿ ವಾರ್ಷಿಕ ಪ್ರೀಮಿಯಂ ೨೦ ರು. ಕಟ್ಟಿದರೆ, ೨,೦೦,೦೦೦ ರೂ.ವರೆಗಿನ ರಕ್ಷಣೆ ಒದಗಿಸುತ್ತದೆ. ಗ್ರಾಮೀಣ ಭಾಗದ ಎಲ್ಲಾ ಅರ್ಹರನ್ನು ಈ ಯೋಜನೆಗೆ ನೊಂದಾಯಿಸಬೇಕು ಎಂದು ಹೇಳಿದರು. ತೆರಿಗೆ ವಸೂಲಾತಿ ಮಾಡಿ

ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಕೂಸಿನ ಮನೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕೂಸಿನ ಮನೆ ಕೇರ್‌ಟೇಕರ್‌ಗಳಿಗೆ, ಗ್ರಂಥಪಾಲಕರಿಗೆ, ಹಾಗೂ ಪಂಚಾಯತಿ ಸಿಬ್ಬಂದಿಗೆ, ನಿಗದಿತ ಸಮಯದಲ್ಲಿ ವೇತನ ಪಾವತಿಸಬೇಕು. ಗ್ರಾಮ ಪಂಚಾಯತಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ತೆರಿಗೆ ವಸೂಲಾತಿ, ಸೇರಿದಂತೆ ನಿಗದಿತ ಕೆಲಸ ಕಾರ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಮುಗಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ಹೆಚ್.ಎನ್.ಮಂಜುನಾಥ್ ಸ್ವಾಮಿ, ಸಹಾಯಕ ಯೋಜನಾ ಅಧಿಕಾರಿ ಎಸ್.ವೆಂಕಟಚಲಪತಿ ಇದ್ದರು.