ಚನ್ನಪಟ್ಟಣ: ತಾಲೂಕಿನಲ್ಲಿ ಸುಮಾರು ೪೪ ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಬಮೂಲ್ ಒಕ್ಕೂಟದಿಂದ ವಿಮೆ ಇನ್ಸೂರೆನ್ಸ್ ಮಾಡಿಸುವ ಯೋಜನೆಗೆ ತಾಲೂಕು ಬಮೂಲ್ ನಿರ್ದೇಶಕ ಲಿಂಗೇಶ್ಕುಮಾರ್ ನೇತೃತ್ವದಲ್ಲಿ ಚಾಲನೆ ನೀಡಿದ್ದು, ತಾಲೂಕಿನ ಹಾಲು ಉತ್ಪಾದಕ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಅಣಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ರಾಸುಗಳ ವಿಮಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿಯೇ ತಾಲೂಕಿನಲ್ಲಿ ಪ್ರತಿದಿನ ೩.೫ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ತಾಲೂಕು ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದ್ದು, ಈ ಸಾಧನೆಗೆ ಹಾಲು ಉತ್ಪಾದಕ ರೈತರು, ಆಡಳಿತ ವರ್ಗದವರು ಕಾರಣ ಎಂದು ಹೇಳಿದರು.ರಾಸುಗಳಿಗೆ ಆರೋಗ್ಯದಲ್ಲಿ ತೊಂದರೆಯಾಗಿ ನಿಧನ ಹೊಂದಿದರೆ ಆಗ ರೈತರು ತಮ್ಮ ರಾಸುಗಳನ್ನು ಕಳೆದುಕೊಂಡು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಪ್ರತಿ ವರ್ಷ ಬಮೂಲ್ ವತಿಯಿಂದ ನಡೆಯುವ ವಿಮೆ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಪ್ರತಿಯೊಂದು ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಆಕಸ್ಮಿಕವಾಗಿ ತಮ್ಮ ರಾಸುಗಳು ಸಾವನ್ನಪ್ಪಿದರೆ ೧ರಿಂದ ೧.೫ ಲಕ್ಷದವರೆಗೂ ವಿಮೆ ಹಣ ಕ್ಲೈಮ್ ಮಾಡಿಕೊಳ್ಳಬಹುದು ಎಂದು ಹೇಳಿದರು.
ಎಸ್.ಲಿಂಗೇಶ್ಕುಮಾರ್ ಬಮೂಲ್ ನಿರ್ದೇಶಕರಾಗಿ ಆಯ್ಕೆಯಾದ ಮೇಲೆ ತಾಲೂಕಿನಲ್ಲಿ ಕ್ಷೀರ ಕ್ರಾಂತಿಯಾಗುತ್ತಿದ್ದು, ರೈತರ ಅನುಕೂಲಕ್ಕಾಗಿ ಬಮೂಲ್ ಒಕ್ಕೂಟದಿಂದ ಜಾರಿಯಾಗುತ್ತಿರುವ ಯೋಜನೆಗಳನ್ನು ತಾಲ್ಲೂಕಿನ ರೈತರಿಗೆ ತಲುಪಿಸಲು ಅವರು ಶ್ರಮಿಸುತ್ತಿದ್ದಾರೆ. ತಾಲೂಕಿನ ರೈತರು ಬಮೂಲ್ ಒಕ್ಕೂಟದಿಂದ ಜಾರಿಯಾಗುವ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಚನ್ನಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ರಾಸುಗಳಿಗೆ ವಿಮೆ ಮಾಡಿಸುತ್ತಿದ್ದು, ಈ ಹಿಂದೆ ಖಾಸಗಿ ಕಂಪನಿಗಳಿಂದ ವಿಮಾ ಯೋಜನೆ ಜಾರಿಯಾಗುತ್ತಿತ್ತು, ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ರವರು ಇದೇ ಮೊದಲ ಬಾರಿಗೆ ಬಮೂಲ್ ಒಕ್ಕೂಟದಿಂದಲೇ ವಿಮೆ ಯೋಜನೆಯನ್ನು ಜಾರಿಗೆ ತಂದು ರೈತರು ಶೇ.೫೦ ರಷ್ಟು ಹಣವನ್ನು ಕಟ್ಟಿದರೆ, ಬೆಂಗಳೂರು ಹಾಲು ಒಕ್ಕೂಟವು ಶೇ.೫೦ ಹಣ ಭರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬಮೂಲ್ ಶಿಬಿರದ ಉಪವ್ಯವಸ್ಥಾಪಕ ಡಾ.ಕಿರಣ್ ಸಿ.ಆರ್., ಕೃಷಿ ಅಧಿಕಾರಿ ಜಿತೇಂದ್ರಕುಮಾರ್, ವಿಸ್ತರಣಾಧಿಕಾರಿಗಳಾದ ರಾಜ, ಆನಂದ್, ಹಾಪ್ಕಾಮ್ಸ್ ನಿರ್ದೇಶಕ ಶ್ಯಾನುಭೋಗನಹಳ್ಳಿ ಪ್ರದೀಪ್, ಕಾರ್ಯದರ್ಶಿಗಳಾದ ಕೆ.ಟಿ.ಲಕ್ಷ್ಮಮ್ಮ, ಕೃಷ್ಣ, ಗರಕಹಳ್ಳಿ ಶಿವಕುಮಾರ್ ಇತರರಿದ್ದರು.
ಪೊಟೋ೨೮ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ಅಣಿಗೆರೆ ಡೇರಿ ಆವರಣದಲ್ಲಿ ಆಯೋಜಿಸಿದ್ದ ರಾಸುಗಳ ವಿಮಾ ಯೋಜನೆಗೆ ಶಾಸಕ ಯೋಗೇಶ್ವರ್ ಚಾಲನೆ ನೀಡಿದರು.