ಕಾವೇರಿ ಜಲಾಶಯದ ಮೇಲ್ಭಾಗದಲ್ಲಿ ವಾಡಿಕೆ ಮಳೆ ಆಗದೇ ಇರುವುದರಿಂದ ಜಲಾಶಯಕ್ಕೆ ಹೆಚ್ಚು ನೀರು ಬಂದಿಲ್ಲ. ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕ ಬಂದ್‌ ಕರೆ ನೀಡಿ, ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.

ನರಗುಂದ: ಪ್ರಸಕ್ತ ವರ್ಷ ನಮ್ಮ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಕಾವೇರಿ ಜಲಾಶಯಕ್ಕೆ ಹೆಚ್ಚು ನೀರು ಸಂಗ್ರಹವಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಆಗ್ರಹಿಸಿದರು.

ಪಟ್ಟಣ ಮಹದಾಯಿ ಮಹಾವೇದಿಕೆ ಹೋರಾಟ ವೇದಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಜಲಾಶಯದ ಮೇಲ್ಭಾಗದಲ್ಲಿ ವಾಡಿಕೆ ಮಳೆ ಆಗದೇ ಇರುವುದರಿಂದ ಜಲಾಶಯಕ್ಕೆ ಹೆಚ್ಚು ನೀರು ಬಂದಿಲ್ಲ. ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕ ಬಂದ್‌ ಕರೆ ನೀಡಿ, ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಆ. 5ರಂದು ರೈತರ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ರೈತರ ಕೃಷಿ ಸಾಲ ಮನ್ನಾ ಇನ್ನು ವಿವಿಧ ಸಮಸ್ಯೆ ಬಗೆಹರಿಸಲು ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುವುದು. ಗದಗ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗುವುದು. ಕಾವೇರಿ ಅಚ್ಚುಕಟ್ಟಿನ ಪ್ರದೇಶದ ರೈತರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡುತ್ತವೆ ಎಂದು ಹೇಳಿದರು. ಈ ಪ್ರತಿಭಟನೆ ರ್ಯಾಲಿಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಬಸವರಾಜ ಸಾಬಲೆ, ಚನ್ನು ನಂದಿ, ವೀರಣ್ಣ ಸೋಪ್ಪಿನ, ಎಸ್.ಎಸ್. ಪಾಟೀಲ, ನಾಗೇಶ ಅಪೋಜಿ, ಅಪ್ಪಣ್ಣ ಮಾನೆ, ಹುಚ್ಚೀರಪ್ಪ ಬಡಿಗೇರ, ಜಗದೀಶ ಮಲ್ಲಾಣ್ಣವರ, ಮುತ್ತಪ್ಪ ಜಿಗ್ಗತ, ಮುನಿಯಪ್ಪ ಶಂಗ್ರಾಲಕೇರಿ, ಪ್ರಕಾಶ ಮುಧೋಳೆ, ಮಲ್ಲಿಕಾರ್ಜುನ ಅಣ್ಣಿಗೇರಿ, ಸಂತೋಷ ಉತ್ತಾಳ, ಶರಣಪ್ಪ ಮ್ಯಾಗೇರಿ, ಸಂಗಪ್ಪ ಕರಡಿ, ಎಂ.ಎಚ್. ಬೂದಿಹಾಳ, ಸಕ್ಕರಪ್ಪ ವಾಲ್ಮೀಕಿ, ಬಾಬು ದಿವಟಿ, ಮಹಾದೇವಗೌಡ ಸಂಕನಗೌಡ್ರ ಇದ್ದರು.