ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ತೀವ್ರಗೊಳಿಸಿ

| Published : May 28 2025, 12:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗಳ ಅನುಷ್ಠಾನ ಕಾರ್ಯ ತೀವ್ರಗೊಳಿಸುವಂತೆ ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗಳ ಅನುಷ್ಠಾನ ಕಾರ್ಯ ತೀವ್ರಗೊಳಿಸುವಂತೆ ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಮಂಗಳವಾರ ಜರುಗಿದ 2024-25ನೇ ಸಾಲಿನ ನಾಲ್ಕನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಕೈಗೊಂಡ ಒಟ್ಟು 34 ರಸ್ತೆ ಕಾಮಗಾರಿಗಳ ಪೈಕಿ 29 ಪೂರ್ಣಗೊಂಡಿದ್ದು, 208 ಕಿಮೀ ಪೈಕಿ 1621 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ಬಾಕಿ ರಸ್ತೆ ಕಾಮಗಾರಿ ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಜಿತ ಸೂಚಿಸಿದರು.

ಶಿರೂರದಿಂದ ಗದ್ದನಕೇರಿ ಕ್ರಾಸ್‌ ವರೆಗೆ ಕೈಗೊಂಡ 24 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿ 4 ವರ್ಷಗಳಿಂದ ನಡೆಯುತ್ತಿದ್ದು, ಇಲ್ಲಿಯವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಪಟ್ಟದಕಲ್ಲದಿಂದ ಶಿರೂರವರೆಗಿನ 26 ಕಿ.ಮೀ ರಸ್ತೆ ಕಾಮಗಾರಿ ಸಹ ವಿಳಂಬವಾಗುತ್ತಿದೆ. ವಿಳಂಬಕ್ಕೆ ಕಾರಣವಾದರೂ ಏನು? ಏಕೆ ಕಾರ್ಯ ಸ್ಥಗತಿಗೊಂಡಿದೆ ಎಂದು ಪ್ರಶ್ನಿಸಿದ ಅವರು, ಯಾವುದೇ ರೀತಿಯ ಸಬೂಬು ಹೇಳದೇ ಹಿಂದಿನ ಗುತ್ತಿಗೆದಾರರು ಕೆಲಸ ಮಾಡದಿದ್ದರೆ, ಬೇರೆಯವರಿಗೆ ಹಸ್ತಾಂತರ ಮಾಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಂಗಾರು ಪ್ರಾರಂಭದ ಪೂರ್ವದಲ್ಲಿಯೇ ಮಳೆಯಾಗುತ್ತಿದ್ದು, ಶಾಲಾ ಕೊಠಡಿಗಳನ್ನು ಸುಸ್ಥಿತಿಯಲ್ಲಿಡಬೇಕು. ಸಣ್ಣಪುಟ್ಟ ದುರಸ್ತಿಗಳನ್ನು ಮಾಡಿಕೊಂಡು ಶಾಲಾ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮುತುವರ್ಜಿ ವಹಿಸಲು ತಿಳಿಸಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಆರೋಗ್ಯ ಇಲಾಖೆಯಿಂದ ನೀಡಿದ ಸಲಹೆ ಪಾಲಿಸುವಂತೆ ಸೂಚನೆ ನೀಡಿದರು. ಬಾಲ್ಯ ವಿವಾಹ ತಡೆಗೆ ಜನರಲ್ಲಿ ಅರಿವು ಮೂಡಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ಆರೋಗ್ಯದ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.ಕೃಷಿ ಇಲಾಖೆಯಲ್ಲಿರುವ ಪ್ರತಿಯೊಂದು ಯೋಜನೆಗಳು ರೈತರಿಗೆ ತಲುಪಿಸುವ ಕಾರ್ಯವಾಗಬೇಕು. ಈ ಹಂಗಾಮಿಗೆ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಬೇಕಾದ ಅಗತ್ಯ ಬೀಜ ಹಾಗೂ ಗೊಬ್ಬರಗಳ ದಾಸ್ತಾನಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಜಿಲ್ಲೆಯ ಸವಳು ಜವಳು ಆಗುವುದನ್ನು ತಪ್ಪಿಸಬೇಕು. ತೋಟಗಾರಿಕೆ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಬೇಕು. ಜೆ.ಜೆ.ಎಂ ಯೋಜನೆಯಡಿ ಸಾಕಷ್ಟು ದೂರುಗಳು ಬರುತ್ತಿವೆ ಸರಿಪಡಿಸಲು ತಿಳಿಸಿದ ಅವರು, ನರೇಗಾದಡಿ ಹೆಚ್ಚಿನ ಕೆಲಸ ಕೈಗೊಳ್ಳಲು ತಿಳಿಸಿದ ಸಂಸದರು ಕೂಲಿ ಆಧಾರಿತ ಕೆಲಸ ಕೈಗೊಳ್ಳಲಾಗುತ್ತಿದ್ದು, ಸಮೂಹ ಶೌಚಾಲಯ ನಿರ್ಮಾಣಕ್ಕೆ ನರೇಗಾದಡಿ ಅನುಮತಿ ದೊರೆಯುವಂತೆ ಮಾಡಲು ಸಭೆಯಲ್ಲಿ ಕೇಳಿಕೊಂಡರು.

ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಕೆಲಸ ಉಳಿದಿವೆ. ಈ ಭಾಗದ ಜನರ ಮಹತ್ವದ ಯೋಜನೆ ಬಾಗಲಕೋಟೆ-ಕುಡಜಿ ರೈಲು ಮಾರ್ಗದ ಕಾರ್ಯದಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಿದಲ್ಲಿ ಜನರಿಗೆ ಅನುಕೂಲವಾಗಿದೆ. ಭೂಮಿ ಸ್ವಾಧೀನ ಪಡಿಸಿಕೊಡುವಲ್ಲಿ ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಕೆಲಸ ಮಾಡಲು ಏನು ತೊಂದರೆ ನಿಮಗೆ, ಮೇಲಧಿಕಾರಿಗಳು ಸಭೆಗೆ ಏಕು ಬರುತ್ತಿಲ್ಲವೆಂದು ಸಭೆಗೆ ಆಗಮಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಪ್ರಶ್ನಿಸಿದರು, ಮುಂದಿನ ಸಭೆಯಲ್ಲಿ ಮೇಲಧಿಕಾರಿಗಳ ಬರದೇ ಇದ್ದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದರು. ನಂತರ ಇತರೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ, ನಾಮನಿರ್ದೇರ್ಶಿತ ಸದಸ್ಯರು ಸೇರಿದಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯಯೋಜನಾಧಿಕಾರಿ ಪುನಿತ್‌ ಆರ್. ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

---ಬಾಕ್

ಕುಡಿಯುವ ನೀರಿನ ಕಾಗಮಾರಿ ಬೇಗ ಮುಗಿಸಿ

ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಕೈಗೊಂಡ ಕಾಮಗಾರಿಯಲ್ಲಿ ರಾಜ್ಯ ಹಾಗೂ ಹೆದ್ದಾರಿ ರಸ್ತೆ ಪಕ್ಕದಲ್ಲಿ ಪೈಪಲೈನ್ ಮಾಡಲು ಜಾಗ ಗುರುತಿಸಿಕೊಡುವಲ್ಲಿ ವಿಳಂಬನೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಬೇಗನೇ ಸಂಬಂಧಿಸಿದ ಅಧಿಕಾರಿಗಳಿಂದ ಎನ್.ಓ.ಸಿ ಕೊಡಿಸುವಂತೆ ಜಿಪಂ ಸಿಇಒ ಶಶಿಧರ ಕುರೇರ ಕೇಳಿದಾಗ ಇದಕ್ಕೆ ದನಿಕೂಡಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಕುಡಿಯುವ ನೀರಿನ ಕಾಮಗಾರಿ ವಿಳಂಬಕ್ಕೆ ಅವಕಾಶ ಕೊಡದೇ ಅಧಿಕಾರಿಗಳು ಪೈಪಲೈನ್ ಮಾಡಲು ತುರ್ತಾಗಿ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.