ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ: ಬೈಕ್‌ಗಳ ಜಪ್ತಿ

| Published : Jul 02 2024, 01:34 AM IST

ಸಾರಾಂಶ

ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿರುವ ಇಲ್ಲಿನ ಶಹರ ಠಾಣೆ ಪೊಲೀಸರು ಅವರಿಂದ ಲಕ್ಷಾಂತರ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ಅಂಶುಕುಮಾರ ತಿಳಿಸಿದರು.

ರಾಣಿಬೆನ್ನೂರು: ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿರುವ ಇಲ್ಲಿನ ಶಹರ ಠಾಣೆ ಪೊಲೀಸರು ಅವರಿಂದ ಲಕ್ಷಾಂತರ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ಅಂಶುಕುಮಾರ ತಿಳಿಸಿದರು.

ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಕಳ್ಳರ ಪತ್ತೆಗಾಗಿ ಎಸ್‌ಪಿ ಅಂಶುಕುಮಾರ, ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ, ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ ಮಾರ್ಗದರ್ಶನದಲ್ಲಿ ಶಹರ ಸಿಪಿಐ ಡಾ. ಶಂಕರ್ ಎಸ್.ಕೆ. ನೇತೃತ್ವದಲ್ಲಿ ಪಿಎಸ್‌ಐಗಳಾದ ಗಡ್ಡೆಪ್ಪ ಗುಂಜುಟಗಿ, ಎಚ್.ಎನ್. ದೊಡ್ಡಮನಿ, ಅಪರಾಧ ಹಾಗೂ ತಾಂತ್ರಿಕ ಸಿಬ್ಬಂದಿ ಒಳಗೊಂಡ ಒಂದು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಸದರಿ ತಂಡವು ನಗರದ ಹಳೆ ಪಿ.ಬಿ. ರಸ್ತೆಯ ಎನ್.ವಿ. ಹೋಟೆಲ್ ಬಳಿ ಹತ್ತಿರ ವಾಹನಗಳನ್ನು ತಪಾಸಣೆ ಮಾಡುವ ಕಾಲಕ್ಕೆ ಸಂಶಯಾಸ್ಪದವಾಗಿ ಸಿಕ್ಕ ನಂಬರ್ ಪ್ಲೇಟ್ ಇಲ್ಲದ ಎರಡು ಮೋಟಾರ ಸೈಕಲ್‌ಗಳು ಕಂಡು ಬಂದವು. ಆಗ ಅವುಗಳ ಬಗ್ಗೆ ಎಂಸಿಸಿಟಿಎನ್ಎಸ್ ತಂತ್ರಾಂಶದಲ್ಲಿ ಪರಿಶೀಲಿಸಿ ನೋಡಿದಾಗ ಶಹರ ಪೊಲೀಸ್ ಠಾಣೆಯಲ್ಲಿ ಅವುಗಳು ಕಳುವಾದ ಕುರಿತು ದೂರು ದಾಖಲಾಗಿರುವುದು ತಿಳಿಯಿತು. ತಕ್ಷಣವೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಿರೇಕೆರೂರಿನ ಎಲೆಕ್ಟ್ರಿಷಿಯನ್ ಮೆಹಮೂದ ಹಜರತ್ ಅಲಿ ಮುಗಳಗೇರಿ (28), ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ತನ್ವಿರ ಅಬ್ದುಲ್ ಮುನಾಫ್ ಲಕ್ಷ್ಮೇಶ್ವರ (28), ಹಿರೇಕೆರೂರಿನ ಗ್ಯಾರೇಜ್ ಕೆಲಸಗಾರ ಖಲಂದರ್ ಸರ್ಪರಾಜ್ ಪಠಾಣ (22) ಕಳ್ಳತನದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದ್ದು ಇವರನ್ನೆಲ್ಲ ವಶಕ್ಕೆ ಪಡೆದುಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಹಿರೇಕೆರೂರಿನ ಹಬ್ಬಿವುಲ್ಲಾ ಬಾರಾಸಾಬ ಕಡವಿ ಹಾಗೂ ಬಂಧಿತ ಆರೋಪಿಗಳು ಸೇರಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಸಂದಣಿ ಪ್ರದೇಶ, ರೇಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್‌ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಹಾವೇರಿ 08, ದಾವಣಗೆರೆ 05, ಶಿವಮೊಗ್ಗ 05, ಚಿಕ್ಕಮಗಳೂರ 03, ಉತ್ತರ ಕನ್ನಡ 03, ಹಾಸನ 01 ಗದಗ 01 ಬೆಳಗಾವಿ 01 ಬೆಂಗಳೂರ 01 ಇತರೆ 01 ಸೇರಿದಂತೆ ₹23 ಲಕ್ಷ ಮೌಲ್ಯದ 29 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಿ.ಬಿ. ಕಡ್ಲೇಪ್ಪನವರ, ವೈ.ಬಿ. ಓಲೇಕಾರ, ಪಿ.ಕೆ. ಸನದಿ, ಎಚ್.ಎಲ್. ದನುವಿನಮನಿ, ವಿಠಲ್.ಡಿ.ಬಿ., ರಾಮರಡ್ಡಿ ಕುಸಗೂರ, ವಾಹನ ಚಾಲಕ ಶ್ರೀಕಾಂತ ಕೊರವರ ತಾಂತ್ರಿಕ ವಿಭಾಗದ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಹಾಗೂ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ, ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ, ಶಹರ ಸಿಪಿಐ ಡಾ. ಶಂಕರ್ ಎಸ್.ಕೆ., ಪಿಎಸ್‌ಐ ಗಡ್ಡೇಪ್ಪ ಗುಂಜುಟಗಿ, ಎಚ್.ಎನ್. ದೊಡ್ಡಮನಿ ಇದ್ದರು.