ಸಾಹಿತ್ಯ ಸಂಶೋಧಕರಿಗೆ ಅಂತಃ ಶಿಸ್ತೀಯ ತಿಳುವಳಿಕೆ ಆಗತ್ಯ

| Published : Jul 07 2024, 01:24 AM IST

ಸಾರಾಂಶ

ದಾವಣಗೆರೆ ವಿವಿ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ನವನೀತ ಗ್ರಂಥ ಬಿಡುಗಡೆ ಮಾಡಿದರು.

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗಸಾಹಿತ್ಯ ಕ್ಷೇತ್ರದ ಸಂಶೋಧಕರಿಗೆ ಅಂತಃ ಶಿಸ್ತೀಯ ತಿಳುವಳಿಕೆ ಆಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಚರಿತ್ರೆ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಸಂರಚನೆಯ ತಿಳುವಳಿಕೆ ಇದ್ದಲ್ಲಿ, ಸಾಹಿತ್ಯ ಏಕೆ ರಚನೆಯಾಗಿದೆ ಎಂಬುವುದು ಮನವರಿಕೆಯಾಗಲಿದೆ. ಹಾಗಾಗಿ ಸಾಹಿತ್ಯ ಕ್ಷೇತ್ರದವರಿಗೆ ಅಂತಃಶಿಸ್ತೀಯ ತಿಳುವಳಿಕೆ ಅಗತ್ಯ ಎಂದರು.

ಸಂಶೋಧನೆ, ವಿಮರ್ಶೆ, ಓದು, ಪೂರ್ವಗ್ರಹ ಹಾಗೂ ಪಕ್ಷಪಾತ ರಹಿತವಾಗಿರಬೇಕು. ಸಂಶೋಧನೆ, ವಿಮರ್ಶೆ ಮಾಡುವವರಿಗೆ ಜಾತಿ, ಧರ್ಮ, ಪಕ್ಷ, ಪಂಥ ಇವೆಲ್ಲವನ್ನೂ ಮೀರಿದ ಮನಸ್ಥಿತಿ ಇರಬೇಕು. ಈ ಸೂಕ್ಷ್ಮವನ್ನು ಸಾಧಿಸುವವನೇ ಸಂಶೋಧನೆ ಹಾಗೂ ವಿಮರ್ಶೆಯ ಹೊಸ ಸಾಧ್ಯತೆಗಳನ್ನು ಹುಡುಕಲು ಸಾಧ್ಯ. ಕಂಡುಕೊಳ್ಳುವ ಕ್ರಿಯೆ ಎಷ್ಟರ ಮಟ್ಟಿಗೆ ಜಾಗೃತವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಸಂಶೋಧನೆ, ವಿಮರ್ಶೆಯ ಸಾಧ್ಯತೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ನಾವು ಕೊಂಡುಕೊಳ್ಳುವುದಕ್ಕೆ ಮಾತ್ರ ಮೀಸಲಾಗದೇ ಕಂಡುಕೊಳ್ಳುವ ಮನುಷ್ಯರಾಗೋಣ ಎಂದು ಹೇಳಿದರು.

ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು. ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸ್ಥಿತ್ಯಂತರಗೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ. ಬರೀ ಹೂವು ನೋಡಿ ಬಹಳ ಸುಂದರವಾಗಿದೆ ಎಂದರೆ ಸಾಲದು, ತನ್ನ ಜೀವನವನ್ನೇ ತೇದು ಹೂವು ಮಾಡಿದ ಮೊಳಕೆಯನ್ನೂ ಜ್ಞಾಪಿಸಿಕೊಳ್ಳಬೇಕು. ಇದು ಮನುಷ್ಯನಿಗೆ ಇರುವ ಜವಾಬ್ದಾರಿ. ಹಾಗೆಯೇ ಸಂಶೋಧನೆ ಹಾಗೂ ಸಾಹಿತ್ಯ ಸೃಷ್ಠಿಯೂ ಸಹ ಹೂವಿನಿಂದ ಮೊಳಕೆವರೆಗೂ ಬರಬೇಕಾಗಿದೆ ಎಂದರು.

ಸಾಮಾಜಿಕ, ಆರ್ಥಿಕ ಸಂರಚನೆಗೂ ಹಾಗೂ ಸಾಹಿತ್ಯ ಸೃಷ್ಠಿ, ಸಂಶೋಧನೆಗೆ ಸಂಬಂಧ ಇದೆ. ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯ ಬೆಳವಣಿಗೆಗಳು ಸಾಹಿತ್ಯ, ಸಂಶೋಧನೆಯ ಮೇಲೆ ಪರಿಣಾಮ ಬೀರುತ್ತವೆ. ಆ ಸಂರಚನೆಯಯಲ್ಲಿಯೇ ಶ್ರೇಣಿಗಳಿರುತ್ತವೆ. ಕೆಲವು ಶ್ರೇಣಿಗಳು ನಮಗೆ ಎದ್ದು ಕಾಣಿಸುತ್ತಿದ್ದು ಅದನ್ನು ನಾವು ಪ್ರಧಾನ ಎಂದು ಭಾವಿಸುತ್ತೇವೆ. ಇನ್ನೂ ಕೆಲವು ಕಾಣಿಸುವುದಿಲ್ಲ ಅದನ್ನು ಅಧೀನ ಎಂದು ತಿಳಿದುಕೊಳ್ಳತ್ತೇವೆ ಎಂದರು.

ಶಿಕ್ಷಣ ವಿಸ್ತರಣೆಯಾದಂತೆ ಸಾಹಿತ್ಯ, ವಿಮರ್ಶೆ, ಸಂಶೋಧನೆಯ ವಿಸ್ತರಣೆಯೂ ಆಯಿತು. ಈ ಹಿನ್ನಲೆಯಲ್ಲಿ ಹಟ್ಟಿ, ಹಾಡಿ, ಗುಡಿಸಲು, ಮಣ್ಣಿನ ಮನೆ, ಮಹಿಳೆಯರಿಗೆ ಶಿಕ್ಷಣ ಬಂತು. ಹಟ್ಟಿಗೆ ಶಿಕ್ಷಣ ಬಂದ ಮೇಲೆ ಆತಂಕ, ಅಕ್ರೋಶ ಹೊರಬರಲು ಶುರುವಾಯಿತು. ಹಾಡುಗಳಿಂದ ಅದರ ಪಾಡುಗಳು, ಮಣ್ಣಿನ ಮನೆಯಿಂದ ಮನದಾಳ, ಮಹಿಳೆಯರಿಗೆ ಶಿಕ್ಷಣ ತಲುಪಿದ ನಂತರ ಇನ್ನೊಂದು ಆಯಾಮವೇ ಸಾಹಿತ್ಯದಲ್ಲಿ ಸೃಷ್ಠಿಯಾಯಿತು. ಹಾಗಾಗಿ ಶಿಕ್ಷಣದಿಂದ ಮಹಿಳಾ ಲೋಕ, ಬುಡಕಟ್ಟು ಲೋಕ, ಅಲೆಮಾರಿ ಲೋಕ, ಸಾಹಿತ್ಯ ಸಂಸ್ಕೃತಿ ಸೇರಿದಂತೆ ಬೇರೆ ಬೇರೆ ಲೋಕ ಅನಾವರಣಕ್ಕೆ ಕಾರಣವಾಯಿತು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಜಿ ವಿಜಯಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಆಹ್ವಾನಿಸಿ, 210 ಜನ ವಿದ್ವಾಂಸರು, ಸಂಶೋಧಕರು ಲೇಖನಗಳನ್ನು ಕಳಿಸಿದ್ದು, ಇವುಗಳನ್ನು ನವನೀತ ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಗ್ರಂಥ ಪ್ರಕಟಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ನವನೀತ ಬೃಹತ್ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು. ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಕುವೆಂಪು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್ ಸಿದ್ದೇಶ್, ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಎಂ.ಯು.ಲೋಕೇಶ್, ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ ಅಧ್ಯಕ್ಷ ಡಾ.ವಿ.ಜಯರಾಮಯ್ಯ, ಶಿಕಾರಿಪುರ ಸುವ್ವಿ ಪಬ್ಲಿಕೇಷನ್ ಪ್ರಕಾಶಕ ಬಿ.ಎನ್.ಸುನೀಲ್ ಕುಮಾರ್, ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಗೀತಾ ವಸಂತ, ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಇದ್ದರು.