ಮಾಹಿತಿ ಅಭಿಯಾನದಲ್ಲಿ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ನಮ್ಮ ಸಂಸ್ಥೆ ವ್ಯಾಪ್ತಿಗೆ ಒಳಪಡುವ ೧೧ ಗ್ರಾಮಗಳ ಸುಮಾರು ಶೇ.೯೦ರಷ್ಟು ರೈತರು ಬೆಳೆ ವಿಮೆಗಳ ಫಲಾನುಭವಿಗಳಾಗಿದ್ದಾರೆ. ಕೇಂದ್ರ ಸರ್ಕಾರ ₹೩ ಲಕ್ಷದವರೆಗೆ, ರಾಜ್ಯ ಸರ್ಕಾರ ಬಡ್ಡಿ ರಹಿತವಾಗಿ ₹೫ ಲಕ್ಷದವರೆಗೆ ಬೆಳೆಸಾಲ ಒದಗಿಸುತ್ತಿದೆ ಎಂದು ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಹೇಳಿದರು.

ವಿಎಸ್‌ಎಸ್ ಸಭಾಭವನದಲ್ಲಿ ಕೆಡಿಸಿಸಿ ಬ್ಯಾಂಕ್ ಶಿರಸಿ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿ ಇವುಗಳ ಸಹಯೋಗದೊಂದಿಗೆ ಕೆಡಿಸಿಸಿ ಬ್ಯಾಂಕಿನ ಕೆಸಿಸಿ ಸ್ಯಾಚುರೇಶನ್ ಅಭಿಯಾನದ ಅಂಗವಾಗಿ ನಡೆದ ಮಾಹಿತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಕಾಳುಮೆಣಸಿಗೂ ಬೆಳೆವಿಮೆ ಸಾಲಸೌಲಭ್ಯ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಹೀಗೆ ಬೆಳೆಸಾಲ ಪಡೆದ ರೈತರಿಗೆ ಲಕ್ಷಕ್ಕೆ ಗರಿಷ್ಠ ₹೧೨ ಸಾವಿರದವರೆಗೆ ಉಳಿತಾಯವಾಗುತ್ತದೆ ಎಂದರು.


ತಾಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ ಮಾತನಾಡಿ, ಬೆಳೆವಿಮೆಗಳ ಕುರಿತು ತಿಳಿಸಿದರಲ್ಲದೆ, ಮಳೆಗಾಲದಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳ ನಿರ್ವಹಣೆಯ ಬಗ್ಗೆ ವಿವರಣೆ ನೀಡಿದರು. ತುತ್ತ, ಸುಣ್ಣಗಳ ಸರಿಯಾದ ಪ್ರಮಾಣದ ಬೆರೆಸುವಿಕೆಯ ಕುರಿತು ವಿವರಿಸಿದರು.

ಮಂಚಿಕೇರಿ ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಆರ್.ಜಿ. ಉಪಾಧ್ಯ ಬ್ಯಾಂಕಿನ ಸಾಲ ಸೌಲಭ್ಯ ಮತ್ತು ರೈತರಿಗೆ ಸಿಗುವ ಅನುಕೂಲಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ವಿಎಸ್‌ಎಸ್ ಉಪಾಧ್ಯಕ್ಷ ಎಂ.ಪಿ. ಹೆಗಡೆ ಚವತ್ತಿ, ಕಾರ್ಯದರ್ಶಿ ನಾಗೇಂದ್ರ ಗೌಡ, ಕೆಡಿಸಿಸಿ ಬ್ಯಾಂಕ್ ಸಾಲಯೋಜನೆಯ ಮೇಲ್ವಿಚಾರಕ ವಿಶ್ವನಾಥ ಭಟ್ಟ, ತೋಟಗಾರಿಕಾ ಇಲಾಖೆಯ ಶಿವಾನಂದ, ವಿಷ್ಣು ಗೌಡರ್ ಮೊದಲಾದವರಿದ್ದರು. ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ಚನ್ನಪ್ಪ ಗೌಡ ನಿರ್ವಹಿಸಿದರು.