ಹುಬ್ಬಳ್ಳಿ:

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಾರ ಹಸ್ತಕ್ಷೇಪವು ಸಹಿಸಲ್ಲ. ಯಾರ ಒತ್ತಡಕ್ಕೆ ಮಣಿಯದೆ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ಗಣೇಶಪೇಟೆಯಲ್ಲಿ ನೂತನ ತಾಲೂಕು ಆರೋಗ್ಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಪವಿತ್ರವಾದದು. ಇಲ್ಲಿ ರಾಜಕಾರಣ, ಬ್ಲ್ಯಾಕ್‌ಮೇಲ್, ಒತ್ತಡ ತಂತ್ರಕ್ಕೆ ಖಂಡಿತ ಆಸ್ಪದ ಕೊಡುವುದಿಲ್ಲ. ಸರ್ಕಾರಿ ಆಸ್ಪತ್ರೆಗಳ ಮೇಲೆ ಬಡವರು, ಮಧ್ಯಮ ವರ್ಗದವರು ಹೆಚ್ಚು ಅವಲಂಬಿತರಾಗಿದ್ದಾರೆ. ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ರೋಗಿಗಳನ್ನು ಮನೆಯ ಸದಸ್ಯರಂತೆ ಆರೋಗ್ಯ ಸಿಬ್ಬಂದಿ ಕಾಣಬೇಕು ಎಂದರು.

ಪೂರ್ವ ಕ್ಷೇತ್ರದಲ್ಲಿ 6 ನಮ್ಮ ಕ್ಲಿನಿಕ್, 4 ನಗರ ಆರೋಗ್ಯ ಕೇಂದ್ರ, 2 ಪಾಲಿಕೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ. ಇನ್ನು 5 ನಮ್ಮ ಕ್ಲಿನಿಕ್ ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ತಾಲೂಕು ಆಸ್ಪತ್ರೆ ಕೂಡ ಘೋಷಣೆ ಆಗಲಿದೆ ಎಂದು ಶಾಸಕರು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಮಾತನಾಡಿ, ಸರ್ಕಾರದ ಎಲ್ಲ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿದೆ. ಪೂರ್ವ ಕ್ಷೇತ್ರದಲ್ಲಿ ಹೆಚ್ಚು ಬಡವರೇ ವಾಸಿಸುತ್ತಿದ್ದು ಇಲ್ಲಿ ಆರೋಗ್ಯ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಹೆಚ್ಚು ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.


ಪಾಲಿಕೆ ಸದಸ್ಯ ಇಲಿಯಾಸ್ ಮನೀಯಾರ, ಆ‌ಸೀಫ್ ಬಳ್ಳಾರಿ, ರಶೀದ್ ಭೋಲಾಬಾಯಿ, ನಾಸೀರ್ ಅಸುಂಡಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಪರಶುರಾಮ, ಡಾ. ಮಹೇಶ್ ಚಿತ್ತರಗಿ, ಡಾ. ಮಹಾಂತೇಶ ಅಡ್ವಾಣಿ, ಡಾ. ಫಾರೂಕ್, ಡಾ. ಶ್ರೀಕಾಂತ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಹುಲಗಣ್ಣ ಇಂಜಗನರಿ, ಡಾ. ಬಸವರಾಜ ಕಮಡೊಳ್ಳಿ ಇದ್ದರು.