ಸಾರಾಂಶ
ಪಟ್ಟಣದಲ್ಲಿ ಚಿಕ್ಕಬಸಪ್ಪ ಕ್ಲಬ್ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ವಿಮೆನ್ಸ್ ಕಾಫೀ ಅವೇರ್ನೆಸ್ ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಚಿಕ್ಕಬಸಪ್ಪ ಕ್ಲಬ್ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮ ಶನಿವಾರ ನಡೆಯಿತು.ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಬಿಸ್ವಾಸ್ ಮಾತನಾಡಿ, ಕೊಡಗು ಕಾಫಿ ಬೆಳೆಯಲು ಉತ್ತಮ ಪರಿಸರ ಹೊಂದಿದ್ದು, ನೆರಳಿನಲ್ಲಿ ಬೆಳೆಯುವ ಕಾಫಿ ಉತ್ತಮ ಸ್ವಾದದೊಂದಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಬೆಳಗ್ಗೆ ಮತ್ತು ಸಂಜೆ ಕಾಫಿ ಸೇವನೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬಾಧಿಸುವುದಿಲ್ಲ. ಮೊದಲು ಕಾಫಿಯನ್ನು ದೇಶದಲ್ಲಿ ಬಳಕೆ ಹೆಚ್ಚಿಸಬೇಕಾಗಿದೆ ಎಂದರು.ಭಾರತದ ಕಾಫಿಗೆ ಮೊದಲು ಸ್ಥಳೀಯವಾಗಿ ಮನ್ನಣೆ ದೊರಕಿಸುವ ಮೂಲಕ ಬಳಕೆದಾರರನ್ನು ಹೆಚ್ಚಿಸುವ, ಕಾಫಿ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣೀ ನರೇಂದ್ರ ಅವರು ತಿಳಿಸಿದರು.ಕಾರ್ಯಕ್ರಮಕ್ಕೆ ಚಿಕ್ಕಬಸಪ್ಪ ಕ್ಲಬ್ ಅಧ್ಯಕ್ಷ ಮಹೇಶ್ ಚಾಲನೆ ನೀಡಿದರು. ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ, ಪೊಲೀಸ್ ಠಾಣೆ, ಆಟೋ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಸಂಸ್ಥೆಯ ಮಹಿಳಾ ಕಾಫಿ ಬೆಳೆಗಾರರು 750 ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಿದರು. ಈ ಸಂದರ್ಭ ಮಡಿಕೇರಿಯ ಕಾಫಿ ಬೆಳೆಗಾರರ ಸಂಘದ ಶ್ಯಾಮ್ ಪೊನ್ನಪ್ಪ, ಅನುರಾಧ ವಿಕ್ರಂ, ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮತ್ತು ಪದಾಧಿಕಾರಿಗಳು, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕಾರ್ಯದರ್ಶಿ ಜ್ಯೋತಿ ಶುಭಾಕರ್ ಮತ್ತು ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.