ಶಾಂತಿಯ ದೇಶದಲ್ಲಿ ಭಂಗ ತಂದಿರುವುದು ಸಹಿಸೆವು

| Published : Apr 30 2025, 12:32 AM IST

ಸಾರಾಂಶ

ಸಾಮಾಜಿಕ ಕಳಕಳಿ ಹೊಂದಿದ್ದ ರೈತರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ

ಕನ್ನಡಪ್ರಭ ವಾರ್ತೆ ನಂಜನಗೂಡು ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಾವು ಎಡ ಮತ್ತು ಬಲ ಪಂಥವಲ್ಲ ನಾವು ಹಸಿರು ಪಂಥ. ಭಾರತ ದೇಶವು ಶಾಂತಿಯ ದೇಶ. ಶಾಂತಿಯ ದೇಶದಲ್ಲಿ ಭಂಗ ತಂದಿದ್ದಾರೆ. ಉಗ್ರರ ದಾಳಿಯಿಂದ ಸಾವು, ನೋವುಗಳಾಗಿವೆ ಇದನ್ನು ನಾವು ಸಹಿಸುವುದಿಲ್ಲ, ರೈತ ಸಮುದಾಯ ಇದನ್ನು ಖಂಡಿಸುತ್ತದೆ ಎಂದು ರಾಜ್ಯ ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ಹೇಳಿದರು.

ಅವರು ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರಾದ ಮಹದೇವ್, ನಾಗರಾಜು, ಬೊಮ್ಮೇಗೌಡರು ಅಕಾಲಿಕವಾಗಿ ಮರಣ ಹೊಂದಿದ್ದ ಮೂವರು ರೈತರಿಗೆ ಹಸಿರು ನಮನ ಕಾರ್ಯಕ್ರಮ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂವರು ರೈತರು ದೈಹಿಕವಾಗಿ ನಮ್ಮೊಟ್ಟಿಗೆ ಇಲ್ಲದಿದ್ದರೂ ಮಾನಸಿಕವಾಗಿ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ಬೆಂಗಳೂರು ಚಲೋ ಸೇರಿದಂತೆ ಇನ್ನಿತರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟವನ್ನು ನಡೆಸಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ರೈತರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಅಗಲಿದ ರೈತರಿಗೆ ರೈತರು ಹಸಿರು ನಮನ ಸಲ್ಲಿಸಿದರು. ಅಕಾಲಿಕ ಮರಣ ಹೊಂದಿದ್ದ ಮೂವರು ರೈತರಿಗೆ ಮತ್ತು ಮಾಜಿ ಸಂಸದ ದಿವಂಗತ ವಿ. ಶ್ರೀನಿವಾಸಪ್ರಸಾದ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಮತ್ತು ಉಗ್ರರ ದಾಳಿಗೆ ಮೃತಪಟ್ಟ ಭಾರತೀಯರಿಗೆ ಮೌನಚರಣೆ ಮಾಡಲಾಯಿತು.ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ,

ಜ. 23 ರಂದು ನಡೆದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ರೈತರ ಸಂವಾದ ಕಾರ್ಯಕ್ರಮದಲ್ಲಿ ನಾವು 33 ಅಂಶಗಳ ಹಾಕ್ಕೋತ್ತಾಯಗಳನ್ನು ಸಲ್ಲಿಸಿದ್ದೆವು.‌ಇದರಲ್ಲಿ 27 ಅಂಶಗಳು ಬಗೆ ಹರಿದು, ಸುಮಾರು 33 ಕೋಟಿ ರು. ಅನುದಾನವನ್ನು ಕೂಡ ಸರ್ಕಾರ ನೀಡಿದೆ ಎಂದರು.ರೈತರೊಂದಿಗೆ ಅಧಿಕಾರಿಗಳು ಸಂವಾದ ಮಾಡಿದ್ದು, ಗ್ರಾಮಾಂತರ ಪ್ರದೇಶದಲ್ಲಿರುವ ಅವಿಭಕ್ತ ರೈತ ಕುಟುಂಬಕ್ಕೆ ನಿವೇಶನದ ಕೊರತೆ ಇರುವುದರಿಂದ ಅವರಿಗೆ ಸರ್ಕಾರದಿಂದ ನಿವೇಶನವನ್ನು ನೀಡಬೇಕು. ಗೋಮಾಳವನ್ನು ಬಡ ರೈತರಿಗೆ ಉಳುಮೆ ಮಾಡಲು ಅವಕಾಶ ಮಾಡಿಕೊಡಬೇಕು. ಸೇಂದಿ ವನ ಸಾಗುವಳಿ ಮಾಡಲು ಬಿಟ್ಟು ಕೊಡಬೇಕು. ಅಹಲ್ಯ ಗ್ರಾಮದಲ್ಲಿ ರುದ್ರ ಭೂಮಿ ಇಲ್ಲದೆ ತೊಂದರೆಯಾಗಿದೆ. ಕೃಷ್ಣಾಪುರ ಗ್ರಾಮದಲ್ಲಿ ಕೆಲವು ಕುಟುಂಬಗಳಿಗೆ ಹಕ್ಕುಪತ್ರ ನೀಡಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಾಗಗಳಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ ಎಂದು ತಹಸೀಲ್ದಾರ್ ಅವರಿಗೆ ರೈತರು ತಿಳಿಸಿದರು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಸಣ್ಣ ನೀರಾವರಿ ಇಲಾಖೆಯ ಎಇಇ ಹಜರುದ್ದೀನ್, ತಾಲ್ಲೂಕು ಅಧ್ಯಕ್ಷ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು, ಬೊಕ್ಕಹಳ್ಳಿ ನಂಜುಂಡಸ್ವಾಮಿ, ದೇವರಾಜ್, ಬಂಗಾರ ನಾಯಕ, ಮಂಜುನಾಥ್, ಮೋಹನ್ ರಾಯಣ್ಣ, ಶಂಕರ ನಾಯಕ, ನಂಜುಂಡ ಭಾಗವಹಿಸಿದ್ದರು.-- ಬಾಕ್ಸ್--

-- ಸ್ಥಳ ಗುರುತಿಸಲಾಗಿದೆ-ತಹಸೀಲ್ದಾರ್ ಶಿವಕುಮಾರ್ ಮಾತನಾಡಿ, ಕಾಸ್ನೂರು, ಮರಳೂರು, ಗೊದ್ದನಪುರ, ನಗರ್ಲೆ ಗ್ರಾಮಗಳಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ದಾಖಲಾತಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಜಾನುವಾರುಗಳ ಮೇವಿಗಾಗಿ ಮೀಸಲಿಟ್ಟಿರುವ ಗೋಮಾಳವನ್ನು ಸಾಗುವಳಿ ಕೊಡಲು ಆಗುವುದಿಲ್ಲ. ಸೇಂದಿವನ ಸರ್ಕಾರದ ಅಧೀನದಲ್ಲಿರುತ್ತದೆ. ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ, ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.