ಸಾರಾಂಶ
ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಬಳಿ ಚರ್ಚೆ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಬಳಿ ಚರ್ಚೆ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.ಅವರು ಕೊರಟಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆ ಈ ಜಾಲವನ್ನು ಪತ್ತೆ ಹಚ್ಚಿ, ಕ್ರಮವಹಿಸುತ್ತಿದ್ದಾರೆ.
ಈ ಬಗ್ಗೆ ವಿಸ್ತೃತವಾಗಿ ತನಿಖೆ ಆಗಬೇಕು ಅಂತಾ ಹೇಳಿದ ಮೇಲೆ ಸಿಎಂ, ಗೃಹ ಸಚಿವರು ಚರ್ಚೆ ಮಾಡಿ ಸಿಐಡಿಗೆ ವಹಿಸಿದ್ದಾರೆ ಎಂದರು.ಇದು ಒಂದು ಜಿಲ್ಲೆಗೆ ಮಾತ್ರ ಸೇರಿದ್ದಲ್ಲ, ಇತರ ರಾಜ್ಯದಲ್ಲಿ ಹಬ್ಬಿದೆ. ಇದು ಸರಿಯಾದ ರೀತಿಯಲ್ಲಿ ತನಿಖೆ ಆಗುವ ಅಗತ್ಯ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಜೊತೆಯಾಗಿ ಕೈಜೋಡಿಸಿ ತನಿಖೆ ಮಾಡಬೇಕಿದೆ ಎಂದರು.
ಲಿಂಗಾನುಪಾತ ನೋಡಿದಾಗ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಸಮಾಜದಲ್ಲಿ ಹೆಣ್ಣು ಮಗು ಅಂದಾಕ್ಷಣ ಬೇಡ ಅನ್ನುವ ಪರಿಸ್ಥಿತಿ ಇದೆ. ಗಂಡು ಮಗು ಬೇಕು ಅನ್ನೋ ಮನಸ್ಥಿತಿ ಹೋಗಬೇಕಿದೆ. ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ನಮ್ಮ ಇಲಾಖೆ ಹೆಚ್ಚು ಗಮನ ಹರಿಸುತ್ತದೆ ಎಂದ ಅವರು ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದರು.