ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ
ಸಾರ್ವಜನಿಕವಾಗಿ ಜನ ಇಂದು ಕಾಣೆಯಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಚಿಂತಕ ದಿವಂಗತ ಡಿ.ಆರ್ ನಾಗರಾಜ ಇದನ್ನೇ ''''''''ಅದೃಶ್ಯ ಜನಾಂಗ'''''''' ಎಂದು ಕರೆಯುತ್ತಿದ್ದರು. 90ರ ದಶಕದ ನಂತರದ ಸನ್ನಿವೇಶಗಳು ಜನಸಮುದಾಯಗಳನ್ನು ನಿರ್ನಾಮ ಮಾಡುತ್ತಿವೆಯೇ ಹೊರತು ಸಮುದಾಯಗಳನ್ನು ಒಳಗೊಳ್ಳುತ್ತಿಲ್ಲ ಎಂದು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ.ಡೊಮಿನಿಕ್ ಅಭಿಪ್ರಾಯಪಟ್ಟರು. ಡಾ.ಡಿ.ಆರ್.ನಾಗರಾಜ ಬಳಗ ಆಯೋಜಿಸಿದ್ದ ದಿವಂಗತ ''''''''ಡಿ.ಆರ್.ಎನ್ಗೆ 72ನೇ ವರ್ಷದ ನೆನಪು'''''''' ಆನ್ಲೈನ್ ವಿಶೇಷ ಉಪನ್ಯಾಸದಲ್ಲಿ ''''''''ಡಿಆರ್ ಎನ್ ಚಿಂತನಾ ಲೋಕ ಮತ್ತು ನಮ್ಮ ವರ್ತಮಾನ'''''''' ಕುರಿತು ಮಾತನಾಡಿ, ಡಿಆರ್ಎನ್ ಚಿಂತನೆ ಕನ್ನಡ ಸಮುದಾಯಗಳ ಅಧೋಗತಿ, ಅಭಿವೃದ್ಧಿಯ ನೆಪದಲ್ಲಿ ಉಂಟಾಗುತ್ತಿರುವ ವಿನಾಶ ಮತ್ತು ಸ್ಥಳೀಯ ಸಂಸ್ಕೃತಿಗಳ ಸ್ಮೃತಿ ಮತ್ತು ವಿಸ್ಮೃತಿಯ ವಾಸ್ತವದ ನಾನಾ ಮಗ್ಗಲುಗಳನ್ನು ಕುರಿತು ಚರ್ಚಿಸುತ್ತದೆ. ಈ ವಿಚಾರದಲ್ಲಿ ಡಿಆರ್ಎನ್ ಅವರು ಎಲ್ಲಾ ವರ್ಗದ ದಮನಿತರ ದೊಡ್ಡ ಸಾಂಸ್ಕೃತಿಕ ಚಿಂತಕ ಹಾಗೂ ಬುದ್ಧಿಜೀವಿ ಎಂದು ಹೇಳಿದರು.ಕನ್ನಡ ಸಾಹಿತ್ಯ ಸಂಸ್ಕೃತಿ ವಿಮರ್ಶೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ತಂದುಕೊಟ್ಟ ಅವರು, ಭಾರತದ ಬಹಳ ದೊಡ್ಡ ಬುದ್ಧಿಜೀವಿ, ಸಾಂಸ್ಕೃತಿಕ ಚಿಂತಕ. ಇವರ ಪ್ರಖರ ಸಾಹಿತ್ಯ, ಸಂಸ್ಕೃತಿ ಚಿಂತನೆ ಜನ ಸಮುದಾಯಗಳ ಅಳಿವು ಉಳಿವಿನ ಪ್ರಶ್ನೆಗಳನ್ನು ಒಳಗೊಂಡಿದೆ. ನೈಜ ದೇಸಿ ಸಮಾಜದ ಆಲೋಚನೆಗಳಿಗೆ ಕನ್ನಡದ ಸಂದರ್ಭದಲ್ಲಿ ಬಹುಮುಖಿಯಾಗಿ ಚಿಂತಿಸುವ ಅಗತ್ಯ ಧಾರೆಗಳನ್ನು ಸೃಷ್ಟಿಸಿಕೊಟ್ಟವರು ಡಿಆರ್ಎನ್ ಎಂದು ತಿಳಿಸಿದರು.ವಿಮರ್ಶಕ ಡಾ. ರವಿಕುಮಾರ್ ನೀಹಾ ಮಾತನಾಡಿ, ಹೊಸ ತಲೆಮಾರಿನ ಸಂಸ್ಕೃತಿ ಚಿಂತನೆಗೆ ಮತ್ತು ತಡ ಸಂಸ್ಕೃತಿಗಳನ್ನು ಯುಕ್ತವಾಗಿ ತಿಳಿಯಲು ಹಾಗೂ ಅಧ್ಯಯನ ಮಾಡಲು ಡಿಆರ್ಎನ್ ಬರಹಗಳ ಓದು ಬಹಳ ಮುಖ್ಯವೆಂದು ಅಭಿಪ್ರಾಯಪಟ್ಟರು.
ರಾಜ್ಯದ ವಿವಿಧೆಡೆಯಿಂದ ಸಂಶೋಧನಾರ್ಥಿಗಳು , ಅಧ್ಯಾಪಕರು, ಬಳಗದ ಪ್ರಕಾಶ್ ಮಂಟೇದ, ಹೇಮಂತ್ ಲಿಂಗಪ್ಪ , ದಯಾನಂದ ಗೌಡ, ಡಾ.ಸತೀಶ್ ಕೆ , ಲಕ್ಷ್ಮೀನಾರಾಯಣ್ ಹಾಗೂ ಮುನಿರಾಜು ಮತ್ತಿತರರು ಪಾಲ್ಗೊಂಡಿದ್ದರು.