₹400 ಕೋಟಿ ವೆಚ್ಚದಲ್ಲಿ 75 ಸಾವಿರ ಎಕರೆಗೆ ನೀರಾವರಿ ಸೌಲಭ್ಯ

| Published : Oct 28 2025, 12:03 AM IST

₹400 ಕೋಟಿ ವೆಚ್ಚದಲ್ಲಿ 75 ಸಾವಿರ ಎಕರೆಗೆ ನೀರಾವರಿ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಹ, ವ್ಯಾಪಕ ಮಳೆಯಿಂದಾಗಿ ಭರ್ತಿಯಾಗಿರುವ ಭೀಮಾ ನದಿಗೆ ಅಡ್ಡಲಾಗಿ ಸೊನ್ನ ಗ್ರಾಮದಲ್ಲಿ ಕಟ್ಟಿರುವ ಏತ ನೀರಾವರಿ ಬ್ಯಾರೇಜ್‌ನಲ್ಲಿ ಸೋಮವಾರದಂದು ಶಾಸಕ ಎಂ.ವೈ ಪಾಟೀಲ್ ಬಾಗಿನ ಅರ್ಪಿಸಿದರು.

ಚವಡಾಪುರ: ಪ್ರವಾಹ, ವ್ಯಾಪಕ ಮಳೆಯಿಂದಾಗಿ ಭರ್ತಿಯಾಗಿರುವ ಭೀಮಾ ನದಿಗೆ ಅಡ್ಡಲಾಗಿ ಸೊನ್ನ ಗ್ರಾಮದಲ್ಲಿ ಕಟ್ಟಿರುವ ಏತ ನೀರಾವರಿ ಬ್ಯಾರೇಜ್‌ನಲ್ಲಿ ಸೋಮವಾರದಂದು ಶಾಸಕ ಎಂ.ವೈ ಪಾಟೀಲ್ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಅವರು ಅಫಜಲಪುರ ತಾಲೂಕಿಗೆ ಭೀಮಾ ನದಿ ಜೀವನದಿಯಾಗಿದೆ. ತಾಲೂಕಿನ ಜನ, ಜಾನುವಾರುಗಳು ನೀರಿನ ಬವಣೆ ನೀಗಿಸುವ ಭೀಮಾ ನದಿ ನಮ್ಮ ಪಾಲಿಗೆ ವರದಾನವಾಗಿದೆ. ಆದರೆ, ಈ ನದಿಯ ನೀರು ತಾಲೂಕಿನ ಕಟ್ಟ ಕಡೆಯ ಹಳ್ಳಿಯ ತನಕ ತಲುಪಿಲ್ಲ. ಹೀಗಾಗಿ, 400 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದು, ಈ ಯೋಜನೆಯಿಂದ ತಾಲೂಕಿನಾದ್ಯಂತ 75 ಸಾವಿರ ಎಕರೆಯಷ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದ ಅವರು ತಾಲೂಕಿನಾದ್ಯಂತ ವ್ಯವಸ್ಥಿತ ಕಾಲುವೆಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. 60 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಗೆ ನೀರು ಪೂರೈಸಬೇಕಾದರೆ ಇನ್ನೂ ಅನೇಕ ಕಾಲುವೆಗಳು ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಒದಗಿಸಿ ಕಾಲುವೆಗಳ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ತಹಸೀಲ್ದಾರ್‌ ಸಂಜೀವಕುಮಾರ ದಾಸರ ಮಾತನಾಡಿ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶಾಸಕ ಎಂ.ವೈ.ಪಾಟೀಲ್ ನೀರಾವರಿ ಕ್ರಾಂತಿ ಮಾಡಿ ಆಧುನಿಕ ಭಗೀರತ ಎನಿಸಿದ್ದಾರೆ ಎಂದರು.

ಭೀಮಾ ಏತ ನೀರಾವರಿ ನಿಗಮದ ಎಇಇ ಸಂತೋಷ ಸಜ್ಜನ್ ಮಾತನಾಡಿ, ಬ್ಯಾರೇಜ್‌ನ ಗರಿಷ್ಠ ನೀರಿನ ಮಟ್ಟ 3.166 ಟಿಎಂಸಿ ಸಂಗ್ರಹವಾಗಿದೆ. ಬ್ಯಾರೇಜ್ ಕೆಳ ಭಾಗದಲ್ಲೂ ಸಾಕಷ್ಟು ನೀರಿನ ಲಭ್ಯತೆ ಇದೆ. ಹೀಗಾಗಿ ತಾಲೂಕಿನ ಜನ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಸಾನಿಧ್ಯವಹಿಸಿ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ, ಪಿಡ್ಬ್ಲೂಡಿ ಎಇಇ ಲಕ್ಷ್ಮಿಕಾಂತ್ ಬಿರಾದಾರ, ಕೆಎನ್‌ಎನ್‌ಎಲ್‌ ಎಇಇ ಸಂತೋಷ ಪಾಟೀಲ್, ಇಇ ಶಿವಕುಮಾರ ಸ್ವಾಮಿ, ಗುರು ಪಾಣೆಗಾಂವ್, ರಮೇಶ್ ಪೂಜಾರಿ, ಶಿವಾನಂದ ಗಾಡಿ, ಭೀಮರಾವ್ ಗೌರ, ರಾಜಕುಮಾರ ಬಬಲಾದ, ಅಣವೀರ ಮಠಪತಿ, ಸಂಗಣ್ಣಗೌಡ ಸೊನ್ನ, ಮಾಜೀದ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.