ಸಾರಾಂಶ
ಮಂಗಳೂರು/ಬೆಳ್ತಂಗಡಿ : ಬುರುಡೆ ಕೇಸ್ನ ಆರೋಪಿ ಚಿನ್ನಯ್ಯ, ಇದೀಗ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಎಸ್ಐಟಿ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬುರುಡೆ ಗ್ಯಾಂಗ್ ಸ್ವಾಮೀಜಿಯೊಬ್ಬರನ್ನು ಭೇಟಿ ಮಾಡಿತ್ತು ಎನ್ನುವ ಸ್ಫೋಟಕ ಮಾಹಿತಿಯನ್ನು ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಸ್ವಾಮೀಜಿಯನ್ನು ಈ ಗ್ಯಾಂಗ್ ಭೇಟಿ ಮಾಡಿ, ಇಡೀ ಪ್ರಕರಣವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿತ್ತು. ಸೌಜನ್ಯ ಪ್ರಕರಣದ ರೀತಿಯಲ್ಲೇ ಶವಗಳನ್ನು ಹೂತಿರುವ ಕೇಸ್ ಇದು. ಧರ್ಮಸ್ಥಳದಲ್ಲಿ ನಿರಂತರವಾಗಿ ಈ ರೀತಿ ಪ್ರಕರಣಗಳು ನಡೆಯುತ್ತಿದೆ ಎಂದು ಸ್ವಾಮೀಜಿ ಮುಂದೆ ವಿವರಣೆ ನೀಡಿತ್ತು ಎಂದು ಹೇಳಲಾಗಿದೆ.
ಇದೊಂದು ಹಿಂದೂ ವಿರೋಧಿ ಹೋರಾಟ ಎಂದು ಗುರುತಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಸ್ವಾಮೀಜಿಯನ್ನು ಭೇಟಿ ಮಾಡಿದ ತಂಡ, ಸರ್ಕಾರಕ್ಕೆ ಒತ್ತಡ ಹೇರಲು ಮುಂದಾಗಿತ್ತು. ಸ್ವಾಮೀಜಿ ಮೂಲಕ ಧರ್ಮಸ್ಥಳ ಪ್ರಕರಣದ ತನಿಖೆ ತಮ್ಮ ಯೋಜನೆಯಂತೆಯೇ ಮುಂದೆ ಸಾಗಲು ಪ್ಲ್ಯಾನ್ ಮಾಡಿತ್ತು. ಸ್ವಾಮೀಜಿ ಮೂಲಕ ಸರ್ಕಾರಕ್ಕೆ ಒತ್ತಡ ಹಾಕುವುದು, ಈ ಹೋರಾಟದಲ್ಲಿ ಇಡೀ ಹಿಂದೂ ಸಮುದಾಯ ತಮ್ಮ ಜೊತೆ ಇದೆ ಎಂದು ಬಿಂಬಿಸಲು ಪ್ಲ್ಯಾನ್ ಮಾಡಲಾಗಿತ್ತು ಎನ್ನುವ ಮಾಹಿತಿಯನ್ನು ಚಿನ್ನಯ್ಯ ಬಯಲು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
200 ಪುಟ ದಾಖಲೆಸಲ್ಲಿಸಿದ ಸಮೀರ್
ಧರ್ಮಸ್ಥಳ ದೇವಸ್ಥಾನದ ವಿರುದ್ಧ ಎಐ ಟೂಲ್ ಬಳಸಿ ನಿಂದನಾತ್ಮಕ ವಿಡಿಯೋ ಮಾಡಿದ ಆರೋಪದಲ್ಲಿ ಬೆಳ್ತಂಗಡಿ ಠಾಣೆಗೆ ಹಾಜರಾದ ವೇಳೆ ‘ದೂತ’ ಯೂಟ್ಯೂಬ್ ಚಾನೆಲ್ನ ಸಮೀರ್, 200ಕ್ಕೂ ಅಧಿಕ ಪುಟಗಳ ದಾಖಲೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ತಾನು ಕೂಡ ದಾಖಲೆ ಇಟ್ಟುಕೊಂಡೇ ವಿಡಿಯೋ ಮಾಡಿರುವ ಬಗ್ಗೆ ಸಮೀರ್ ಎಸ್ಐಟಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಮೀರ್ ಸಲ್ಲಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದು, ಅದರ ಸತ್ಯಾಸತ್ಯತೆ ಪರಿಶೀಲನೆಗೆ ಎಸ್ಐಟಿ ಮುಂದಾಗಿದೆ. ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸಮೀರ್ಗೆ ಎಸ್ಐಟಿ ತನಿಖಾಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.