ಐಸಿರಿ ಕವಿಗೋಷ್ಠಿ, ಸಮೂಹ ಜಾನಪದ ನೃತ್ಯ ಕಾರ್ಯಕ್ರಮ

| Published : Oct 07 2024, 01:33 AM IST

ಸಾರಾಂಶ

ಐಸಿರಿ ಕವಿಗೋಷ್ಠಿ ಮತ್ತು ಸಮೂಹ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ಜಾನಪದ ತಂಡಗಳಿಂದ ನೃತ್ಯ ಪ್ರದರ್ಶನ ನೆರವೇರಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕನ್ನಡಸಿರಿ ಸ್ನೇಹ ಬಳಗದ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ತಾಲೂಕು ಘಟಕದ ಉದ್ಘಾಟನೆ ಮತ್ತು ಶರದೃವಿನ ಐಸಿರಿ ಕವಿಗೋಷ್ಠಿ ಮತ್ತು ಸಮೂಹ ಜಾನಪದ ನೃತ್ಯ ಕಾರ್ಯಕ್ರಮ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಇಲ್ಲಿನ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ನಂತರ ಮಾತನಾಡಿ, ಇಂದು ಶಿಕ್ಷಣದ ಮೌಲ್ಯ ಕುಂದುತ್ತಿದೆ. ಪೋಷಕರು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮಕ್ಕಳಲ್ಲಿ ತಿಳಿಯಪಡಿಸಬೇಕಿದೆ. ಹೊರ ರಾಜ್ಯಗಳಲ್ಲಿ ಆಯಾ ರಾಜ್ಯದ ಪ್ರಮುಖ ಭಾಷೆಗಳಿಗೆ ಮಾನ್ಯತೆ ಕೊಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡದಿರುವುದು ದುರಾದೃಷ್ಟ. ಎಲ್ಲರೂ ಮೌಲ್ಯವರ್ಧಿತ ಶಿಕ್ಷಣಕ್ಕೆ ಒತ್ತು ನೀಡಬೇಕು. ಕುವೆಂಪು, ಎಸ್.ಎಲ್. ಭೈರಪ್ಪ ನವರಂತ ಸಾಹಿತಿಗಳು ಕವಿಗಳು ಕೊಡಗಿನಲ್ಲಿ ಹುಟ್ಟಬೇಕು ಎಂದರು.

ಮುಖ್ಯ ಬಾಷಣಕಾರರಾಗಿ ಆಗಮಿಸಿದ್ದ ಕುಶಾಲನಗರದ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಮಾತನಾಡಿ, ನಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ನೀಡದೆ, ಸಂಸ್ಕಾರಯುತ ಶಿಕ್ಷಣ ನೀಡಿದಲ್ಲಿ ಮಾತ್ರ ಅವರು ಸಮಾಜದಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯ. ನಾವು ಮಕ್ಕಳಿಗೆ ಓದುವುದನ್ನು ಮಾತ್ರ ಕಲಿಸಿದ್ದೇವೆ. ಕಲಿಕಾ ಕ್ರಮವನ್ನು ತಿಳಿಸಿಲ್ಲ. ಕೇವಲ ಪರೀಕ್ಷೆಗಾಗಿ ಮಾತ್ರ ವಿದ್ಯಾರ್ಥಿಗಳು ಕಲಿಯುತ್ತಿರುವುದರಿಂದ ಅವರಲ್ಲಿ ಸಂಸ್ಕಾರದ ಅರಿವಿಲ್ಲ ಎಂದರು.

ಅಧ್ಯಕ್ಷತೆಯನ್ನು ಕನ್ನಡಸಿರಿ ಜಿಲ್ಲಾ ಘಟಕದ ಅದ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾ ನರ್ಸಿಂಗ್ ಹೋಮ್‌ನ ವ್ಯವಸ್ಥಾಪಕ ಸುಲೈಮಾನ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಜವರಪ್ಪ, ನ.ಲ. ವಿಜಯ, ಎಲ್.ಎಂ. ಪ್ರೇಮ ಉಪಸ್ಥಿತರಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಕಾಜೂರು ಸತೀಶ್ ವಹಿಸಿದ್ದರು. ಇದೇ ಸಂದರ್ಭ ಜಾನಪದ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.