ಸಾರಾಂಶ
ಮಣಿಪಾಲದಲ್ಲಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು । ಜತೆಗಿದ್ದ ಯುವತಿ ವಶಕ್ಕೆ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ಗರುಡ ಗ್ಯಾಂಗಿನ ನಟೋರಿಯಸ್ ರೌಡಿ ಇಸಾಕ್, ಮಂಗಳವಾರ ಮಧ್ಯರಾತ್ರಿ ಮಣಿಪಾಲದಲ್ಲಿ ಪೊಲೀಸರಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಆದರೆ ಆತನ ಜೊತೆಗಿದ್ದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ನೆಲಮಂಗಲದಲ್ಲಿ ಇತ್ತೀಚೆಗೆ ನಡೆದ ದರೋಡೆಯೊಂದಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಆತನ ಮೇಲೆ ಕಣ್ಣಿಟ್ಟಿದ್ದರು. ಅದರಂತೆ ಆತ ಮಂಗಳವಾರ ಮಣಿಪಾಲಕ್ಕೆ ಬರುವ ಬಗ್ಗೆ ಮಾಹಿತಿ ಪಡೆದ ಅಲ್ಲಿನ ಪೊಲೀಸರು ಮಣಿಪಾಲಕ್ಕೆ ಬಂದಿದ್ದರು. ಆತ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಕಾರಿನಲ್ಲಿ ತನ್ನ ಗೆಳೆತಿಯೊಂದಿಗೆ ಸಂಚರಿಸುತ್ತಿದ್ದಾಗ ನೆಲಮಂಗಲದ ಪೊಲೀಸರು ಆತನನ್ನು ತಡೆಯಲೆತ್ನಿಸಿದರು. ಆದರೆ ಪೊಲೀಸರನ್ನು ಕಂಡು ಇಸಾಕ್, ಗೆಳತಿಯೊಂದಿಗೆ ಅತೀವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ.ತಕ್ಷಣ ನೆಲಮಂಗಲ ಪೊಲೀಸರು ಆತನನ್ನು ಚೇಸ್ ಮಾಡುತ್ತಾ, ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದರು. ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್, ತಕ್ಷಣ ಕಾರ್ಯಪ್ರವೃತ್ತರಾದರು. ಮಣ್ಣಪಳ್ಳದ ಬಳಿ ಆತನ ಪಂಕ್ಚರ್ ಆದ ಕಾರು ಪತ್ತೆಯಾಯಿತು. ಆದರೆ ಆತ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಆತನ ಗೆಳತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತೀವೇಗಕ್ಕೆ ಕಾರಿನ ಟಯರ್ ಪಂಕ್ಚರ್ ಆದ ತಕ್ಷಣ ಆತ ಗೆಳತಿಯನ್ನೂ ಬಿಟ್ಟು ಕಾರಿಳಿದು ಓಡಿ ಹೋಗಿದ್ದಾನೆ.ತಪ್ಪಿಸಿಕೊಳ್ಳುವ ಭರದಲ್ಲಿ ಆತನ ಪೊಲೀಸರ ಜೀಪ್ ಮತ್ತು ರಸ್ತೆ ಪಕ್ಕ ನಿಲ್ಲಿಸಿದ್ದ 3 ಕಾರು ಹಾಗೂ 1 ಬೈಕಿಗೂ ಡಿಕ್ಕಿ ಹೊಡೆದು ಜಖಂಗೊಳಿಸಿದ್ದಾನೆ.ಕಾಪುವಿನಲ್ಲಿ ಕಿಡಿಗೇಡಿ ಕೃತ್ಯಗಳನ್ನು ಮಾಡುತ್ತಿದ್ದ ಯುವಕರು ಸೇರಿ ಕಟ್ಟಿಕೊಂಡಿರುವ ಈ ಗರುಡ ಎಂಬ ದರೋಡೆ ಗ್ಯಾಂಗ್ನ ಸದಸ್ಯನಾಗಿರುವ ಇಸಾಕ್, ಉಡುಪಿ ಜಿಲ್ಲೆಯಲ್ಲಿಯೂ ದರೋಡೆ, ಜೀವ ಬೆದರಿಕೆ, ಕೋಮು ದ್ವೇಷ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಅಲ್ಲದೇ ಈತನ ಮೇಲೆ ದಕ್ಷಿಣ ಮತ್ತು ಇತರ ಜಿಲ್ಲೆಗಳ್ಲಲಿಯೂ ಪ್ರಕರಣಗಳಿವೆ.