ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ: ಶಾಸಕ ಪಠಾಣ ಸೂಚನೆ

| Published : May 27 2025, 11:52 PM IST

ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ: ಶಾಸಕ ಪಠಾಣ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸವಣೂರು ತಾಲೂಕಿಗೆ 2700 ಟನ್ ಡಿಎಪಿ ಗೊಬ್ಬರದ ಬೇಡಿಕೆಯಿದೆ. ಆದರೆ ಈಗಾಗಲೇ 755 ಟನ್ ಲಭ್ಯವಾಗಿದೆ. ಉಳಿದ 1995 ಟನ್ ಗೊಬ್ಬರ ಅವಶ್ಯಕವಾಗಿದೆ.

ಸವಣೂರು: ಸಭೆಗೆ ಗೈರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರಿಗೆ ಶಾಸಕ ಯಾಸೀರ ಅಹಮ್ಮದ ಖಾನ ಪಠಾಣ ಸೂಚನೆ ನೀಡಿದರು.ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ರೈತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಸಭೆಗೆ ವಿಳಂಬವಾಗಿ ಬರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ನಮ್ಮ ಕ್ಷೇತ್ರ ಶೇ. 80ರಷ್ಟು ರೈತಾಪಿ ವರ್ಗವಾಗಿರುವುದರಿಂದ ತಾಲೂಕಿನ ರೈತಾಪಿ ವರ್ಗಕ್ಕೆ ಸಂಬಂಧಿಸಿದ ಎಲ್ಲ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೆ ಸಾಧ್ಯವಾದಷ್ಟು ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.ತಾಲೂಕಿಗೆ 2700 ಟನ್ ಡಿಎಪಿ ಗೊಬ್ಬರದ ಬೇಡಿಕೆಯಿದೆ. ಆದರೆ ಈಗಾಗಲೇ 755 ಟನ್ ಲಭ್ಯವಾಗಿದೆ. ಉಳಿದ 1995 ಟನ್ ಗೊಬ್ಬರ ಅವಶ್ಯಕವಾಗಿದೆ. ಇದರಲ್ಲಿ ಮೂರ್ನಾಲ್ಕು ದಿನಗಳಲ್ಲಿ ಗೊಬ್ಬರ ಬರುತ್ತದೆ ಎಂದು ಕೃಷಿ ಇಲಾಖೆಯ ಎಡಿ ಸವಿತಾ ಚಕ್ರಸಾಲಿ ಸಭೆಗೆ ವಿಷಯ ಪ್ರಸ್ತಾಪ ಮಾಡುತ್ತಿದ್ದಂತೆ ವಿವಿಧ ರೈತ ಸಂಘಗಳ ಪದಾಧಿಕಾರಿಗಳು ಸುಮಾರು 755 ಟನ್ ಗೊಬ್ಬರವನ್ನು ತಾಲೂಕಿನ ರೈತರಿಗೆ ತಲುಪಿಸದೆ ಬೇರೆ ತಾಲೂಕಿನ ರೈತರಿಗೆ ಮಾರಾಟ ಮಾಡಿದ್ದಾರೆ ಎಂದು ಶಾಸಕರ ಎದುರು ಗಂಭೀರ ಆರೋಪ ಮಾಡುತ್ತಿದ್ದಂತೆ ಶಾಸಕ ಯಾಸಿರ ಅಹ್ಮದ ಖಾನ ಪಠಾಣ ಅವರು, ನಿರ್ದೇಶಕಿಗೆ ಕೂಡಲೇ ತಾಲೂಕಿನ ಮಾರಾಟಗಾರರ ಹಾಗೂ ವಿವಿಧ ಸಂಘ- ಸಂಸ್ಥೆಗಳಿಗೆ ನೀಡಿರುವ ಗೊಬ್ಬರದ ಮಾಹಿತಿಯನ್ನು ತ್ವರಿತಗತಿಯಲ್ಲಿ ರೈತ ಸಂಘದ ಮುಖಂಡರಿಗೆ ಸಲ್ಲಿಸಲು ಸೂಚನೆ ನೀಡಿದರು.ಕ್ಷೇತ್ರಗಳಲ್ಲಿ ನಿಜವಾದ ಫಲಾನಿಭವಿಗಳಿಗೆ ಬೆಳೆವಿಮೆ ನೀಡದೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯವರು ವಿಮಾ ಕಂಪನಿಯವರೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಂತೆ ಶಾಸಕರು, ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.ಸುಮಾರು ₹100 ಕೋಟಿ ಅನುದಾನವನ್ನು ಲಭ್ಯತೆ ಮಾಡಿಕೊಂಡು ಪಟ್ಟಣದ ಮೋತಿತಲಾಬ್ ಕೆರೆಯನ್ನು ಅಭಿವೃದ್ಧಿ ಮಾಡಿ ಪಟ್ಟಣದ ಸಾರ್ವಜನಿಕರಿಗೆ ನಿತ್ಯ ಶುದ್ಧ ನೀರನ್ನು ಕುಡಿಯಲು ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಉಪವಿಭಾಗಾದಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್ ಭರತರಾಜ ಕೆ.ಎನ್., ಸವಣೂರು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಎಂ.ಜೆ. ಮುಲ್ಲಾ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ರಾಣಿಬೆನ್ನೂರು: ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಭಾರತೀಯ ಕೃಷಿ ಅನುಸಂದಾನ ಪರಿಷತ್, ನವದೆಹಲಿ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ ಇವರ ಸಹಯೋಗದಲ್ಲಿ ಮೇ 29ರಿಂದ ಜೂನ್ 12ರ ವರೆಗೆ ಮುಂಗಾರು ಪೂರ್ವ ಹಂಗಾಮಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನವನ್ನು ಐಸಿಎಆರ್‌ ಸಂಸ್ಥೆಗಳ, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ(ಕೆವಿಕೆ)ವಿಜ್ಞಾನಿಗಳನ್ನು ಒಳಗೊಂಡ ಎರಡು ತಂಡಗಳು ಮತ್ತು ಕೃಷಿ, ತೋಟಗಾರಿಕೆ, ಪಶುಪಾಲನಾ, ಮೀನುಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ.

ಮುಂಗಾರು ಹಂಗಾಮಿನ ಬೆಳೆಗಳ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು. ರೈತರಿಗೆ ಪ್ರಯೋಜನಕಾರಿಯಾಗುವ ವಿವಿಧ ಸರ್ಕಾರಿ ಯೋಜನೆಗಳು ಮತ್ತು ನೀತಿಗಳ ಕುರಿತು ಮಾಹಿತಿಯನ್ನು ತಿಳಿಸುವುದು. ಮಣ್ಣು ಮತ್ತು ನೀರು ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಬಳಕೆ ಕುರಿತು ಪ್ರಚಾರ ಮಾಡುವುದು. ರಾಸಾಯನಿಕ ಗೊಬ್ಬರಗಳ ವಿವೇಚನಾಯುಕ್ತ ಮತ್ತು ಸೂಕ್ತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು.ಕ್ಷೇತ್ರ ಮಟ್ಟದ ಆವಿಷ್ಕಾರಗಳ ಬಗ್ಗೆ ರೈತರಿಂದ ಪ್ರತಿಕ್ರಿಯೆ ಸಂಗ್ರಹಿಸಿ ಮತ್ತು ಅದಕ್ಕೆ ಅನುಗುಣವಾಗಿ ಸಂಶೋಧನೆಯನ್ನು ಸಿದ್ಧಪಡಿಸುವುದು ಅಭಿಯಾನದ ಮುಖ್ಯ ಉದ್ದೇಶಗಳಾಗಿವೆ. ಜಿಲ್ಲೆಯ ಎಲ್ಲ ರೈತರು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಹನುಮನಮಟ್ಟಿ ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.