ಹೋರಾಟ ಮಾಡದಿದ್ದರೂ ಪರವಾಗಿಲ್ಲ ಮಾರಾಟವಾಗಬೇಡಿ

| Published : May 02 2024, 12:16 AM IST / Updated: May 02 2024, 12:17 AM IST

ಸಾರಾಂಶ

ದೇಶದ ಕಟ್ಟಕಡೆ ವ್ಯಕ್ತಿಗೆ ಸರ್ಕಾರದ ಎಲ್ಲ ಸೌಲಭ್ಯ ತಲುಪಿಸುವ ಮಾದರಿ ಆಡಳಿತವನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ

ಶಿರಹಟ್ಟಿ: ನೀವು ಹೋರಾಟ ಮಾಡದಿದ್ದರೂ ಪರವಾಗಿಲ್ಲ. ತಪ್ಪದೇ ಯೋಚಿಸಿ ಸೂಕ್ತ ಅಭ್ಯರ್ಥಿಗೆ ಮತ ಹಾಕಿ ದೇಶದ ಸಮಗ್ರ ಅಭಿವೃದ್ಧಿಯೊಂದಿಗೆ ಆರ್ಥಿಕ ಸಬಲೀಕರಣದಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನಕ್ಕೆ ತಂದ ಕೀರ್ತಿ ಮೋದಿಯವರದ್ದಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರದ ಅನೇಕ ಯೋಜನೆಗಳು ದೇಶದ ವಿವಿಧ ವರ್ಗಗಳ ಸಮುದಾಯಗಳಿಗೆ ತಲುಪಿವೆ ಎಂದು ಚಿತ್ರ ನಟಿ ಶ್ರುತಿ ಹೇಳಿದರು.

ಬುಧವಾರ ಸಂಜೆ ಹಾವೇರಿ- ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯ ಪರ ರೋಡ್‌ಶೋ ನಡೆಸಿ ಮತಯಾಚನೆ ಮಾಡಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.

ದೇಶದ ಕಟ್ಟಕಡೆ ವ್ಯಕ್ತಿಗೆ ಸರ್ಕಾರದ ಎಲ್ಲ ಸೌಲಭ್ಯ ತಲುಪಿಸುವ ಮಾದರಿ ಆಡಳಿತವನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ. ದೇಶದ ಅಭಿವೃದ್ಧಿಯ ಓಟ ಇನ್ನು ಹೆಚ್ಚಿನ ವೇಗ ಪಡೆಯುವಂತೆ ಕಳೆದ ಹತ್ತು ವರ್ಷಗಳಿಂದ ಮೋದಿ ಮಾಡಿದ ಸಾಧನೆಗಳೆ ಸಾಕ್ಷಿ ಎಂದರು.

ಪ್ರಸಕ್ತ ಲೋಕಸಭಾ ಚುನಾವಣೆಯು ದೇಶದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿದ್ದು, ಮತದಾರರು ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ಆಸೆ ಪಡದೇ ೩ನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ಚುನಾವಣೆ ಇದಾಗಿದೆ. ಹಾವೇರಿ- ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ತಂದಿದ್ದ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸಿದೆ. ಬೊಮ್ಮಾಯಿ ಅವರನ್ನು ಆಯ್ಕೆಮಾಡಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುವ ಮೂಲಕ ಈ ಭಾಗದ ಮತದಾರರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿದ್ದಾರೆ. ಆದ್ದರಿಂದ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

೩ ಲಕ್ಷ ಮತಗಳ ಅಂತರದಿಂದ ಗೆಲುವು: ತಮ್ಮ ಭಾಷಣದಲ್ಲಿ ನೆರೆದಿದ್ದ ಜನಸ್ತೋಮವನ್ನು ಪ್ರಶ್ನಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಎಷ್ಟು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತೀರಿ ಎಂದು ಕೇಳುತ್ತಿದ್ದಂತೆ ಎಲ್ಲರೂ ೩ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಕೊಡುತ್ತೇವೆ. ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಆಡಳಿತ ಬರುತ್ತದೆ ಎಂದು ಏರುಧ್ವನಿಯಲ್ಲಿ ಹೇಳುತ್ತಿದ್ದಂತೆ ಈ ನಿಮ್ಮ ಮಾತು ಮತದಾನ ಮುಗಿಯುವ ವರೆಗೂ ಗಟ್ಟಿಯಾಗಿರಬೇಕು.ಯಾವುದೇ ಆಸೆ, ಆಮಿಷಕ್ಕೆ ಮರುಳಾಗದೇ ಬಿಜೆಪಿಗೆ ಮತ ಹಾಕಬೇಕು ಎಂದು ಕೇಳಿಕೊಂಡರು.

ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಧರ್ಮ ಪತ್ನಿ ಚನ್ನಮ್ಮ ಬೊಮ್ಮಾಯಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಅನಿತಾ ಅಂಕಲಕೋಟಿ, ಜಾನು ಲಮಾಣಿ, ಯಲ್ಲಪ್ಪ ಇಂಗಳಗಿ, ಬಸವರಾಜ ವಡವಿ, ತಿಪ್ಪಣ್ಣ ಕೊಂಚಿಗೇರಿ, ಶ್ರೀನಿವಾಸ ಬಾರಬರ ಸೇರಿ ಅನೇಕರು ಇದ್ದರು.