ಅವ್ಯಾಚ ಶಬ್ದಗಳಿಂದ ನಿಂದಿಸಿರುವುದು ಅಪರಾಧ

| Published : Oct 22 2025, 01:03 AM IST

ಸಾರಾಂಶ

ವಾಲ್ಮೀಕಿ ಸಮಾಜದ ಮುಖಂಡರನ್ನು ಸಾರ್ವಜನಿಕವಾಗಿ ನಿಂದಿಸಿರುವ ಮಾಜಿ ಸಂಸದ ರಮೇಶ್‌ ಕತ್ತಿ ಅವರನ್ನು ಜಾತಿ ನಿಂದನೆ ಪ್ರಕರಣದಡಿ ಬಂಧಿಸಬೇಕೆಂದು ನಗರದಲ್ಲಿ ವಾಲ್ಮೀಕಿ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ವಾಲ್ಮೀಕಿ ಸಮಾಜದ ಮುಖಂಡರನ್ನು ಸಾರ್ವಜನಿಕವಾಗಿ ನಿಂದಿಸಿರುವ ಮಾಜಿ ಸಂಸದ ರಮೇಶ್‌ ಕತ್ತಿ ಅವರನ್ನು ಜಾತಿ ನಿಂದನೆ ಪ್ರಕರಣದಡಿ ಬಂಧಿಸಬೇಕೆಂದು ನಗರದಲ್ಲಿ ವಾಲ್ಮೀಕಿ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ವಾಲ್ಮೀಕಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿ, ಮುಖಂಡರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನಾಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಜವರೇಗೌಡರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನಾ ಮಾತನಾಡಿದ ಜಿಪಂ ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣಾ ಮತದಾನ ಸಂದರ್ಭದಲ್ಲಿ ಚಿಕ್ಕೋಡಿ ಮಾಜಿ ಸಂಸದ ರಮೇಶ್‌ ಕತ್ತಿ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದಾಗ ಬೇಡರ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಸಾರ್ವಜನಿಕವಾಗಿ ವಾಲ್ಮೀಕಿ ಬೇಡನಾಯಕ ಜನಾಂಗವನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕೂಡಲೇ ಬೆಳಗಾವಿ ಜಿಲ್ಲಾಡಳಿತ ರಮೇಶ್‌ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಸಮಾಜಕ್ಕೆ ಅವಮಾನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ರಾಜ್ಯಾದ್ಯಂತ 75 ಲಕ್ಷ ವಾಲ್ಮೀಕಿ ಸಮುದಾಯ ಜನರಿಗೆ ನೋವು ಉಂಟಾಗಿದೆ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೊಂಗನೂರುಚಂದ್ರು ಮಾತನಾಡಿ, ರಮೇಶ್‌ ಕತ್ತಿ ದರ್ಪದಿಂದ ಮಾತನಾಡಿದ್ದಾರೆ. ವಾಲ್ಮೀಕಿ ಜನಾಂಗದ ಬಗ್ಗೆ ಹಗುರವಾಗಿ ಮಾತನಾಡುವ ಜೊತೆಗೆ ಸಮುದಾಯವನ್ನು ನಿಂದನೆ ಮಾಡಿರುವುದು ಸರಿಯಲ್ಲ. ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಕೂಡಲೇ ರಮೇಶ್‌ ಕತ್ತಿಯನ್ನು ಬಂಧಿಸಿ, ಜಾತಿ ನಿಂದನೆ ಪ್ರಕರಣ ದಾಖಲು ಮಾಡಬೇಕು. ಇಂದು ನಾವೆಲ್ಲರು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದು, ಕ್ರಮ ಕೈಗೊಳ್ಳಲು ಮೀನಾಮೇಷ ಎನಿಸಿದರೆ, ರಾಜ್ಯಾದ್ಯಂತ ವಾಲ್ಮೀಕಿ ಸಮಾಜ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಾಲ್ಮೀಕಿ ಹಿತರಕ್ಷಣಾ ಸಮಿತಿಯಕೃಷ್ಣನಾಯಕ, ಜಿ.ಪಂ. ಮಾಜಿ ಸದಸ್ಯರಮೇಶ್, ಸಾಗಡೆ ನಂಜುಂಡನಾಯಕ, ಕೆಂಪನಪುರ ಗ್ರಾಪಂ ಮಾಜಿ ಅಧ್ಯಕ್ಷ ಆರ್.ಮಾದೇಶ್, ಅರಕಲವಾಡಿ ಸೋಮೇಶ್, ಕಂಡಕ್ಟರ್ ಚಾ.ಸಿ. ಸೋಮನಾಯಕ, ಕಿಲಗೆರೆಜಯರಾಜು, ಸಿದ್ದರಾಜು, ರವಿಕುಮಾರ್, ತಿರುಪತಿ ನಾಯಕ, ರಾಚನಾಯಕ, ಎಚ್.ಎಂ. ಶಿವಣ್ಣ, ಅಮಚವಾಡಿರಾಜು, ಎನ್. ನಾಗೇಶ್, ಬಂಗಾರು, ಸಿದ್ದನಾಯಕ, ರಾಚನಾಯಕ, ರವಿಕುಮಾರ್, ಹನುಮಂತನಾಯಕ ಇದ್ದರು.