ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಜಲಾನಯನ ವ್ಯಾಪ್ತಿಯಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಸರ್ಕಾರ ಕಾಲಾವಕಾಶ ಕೋರುವುದು ಸೂಕ್ತ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ತಿಳಿಸಿದರು.

ನಗರದ ಜೆ.ಸಿ. ವೃತ್ತದಲ್ಲಿ ಕಾವೇರಿ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರು ಮತ್ತು ಬೆಳೆ ರಕ್ಷಣೆ ಸದ್ಯದ ಸ್ಥಿತಿಯಲ್ಲಿ ಸವಾಲಾಗಿರುವುದರಿಂದ ನೀರು ಬಿಡುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಾಧಿಕಾರಕ್ಕೆ ಕಾಲಾವಕಾಶದ ಅರ್ಜಿ ಸಲ್ಲಿಸುವ ಸಂಬಂಧ ಚರ್ಚಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕದಿಂದ ತಮಿಳುನಾಡಿಗೆ ಯಾವುದೇ ಸಂದರ್ಭದಲ್ಲಿ ನೀರು ಬಿಡಬಹುದು. ಆದರೆ, ತಮಿಳುನಾಡಿಗೆ ಹೋದಂತಹ ನೀರು ಹಿಮ್ಮುಖವಾಗಿ ಕರ್ನಾಟಕಕ್ಕೆ ಬರುವುದಿಲ್ಲ. ಈ ಸಾಮಾನ್ಯ ಸಂಗತಿಯನ್ನು ನ್ಯಾಯಾಲಯ ಮತ್ತು ಪ್ರಾಧಿಕಾರಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸದ್ಯದ ಸ್ಥಿತಿಯಲ್ಲಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಉತ್ತಮ ಮಳೆಯ ನಂತರ ನೀರು ಬಿಡುವ ಕುರಿತು ಚರ್ಚಿಸುವುದು ಒಳ್ಳೆಯದು ಎಂದು ಹೇಳಿದರು.

೧೯೨೪ರ ಮೊದಲ ಒಪ್ಪಂದದಿಂದ ಇಂದಿನವರೆಗೂ ಕರ್ನಾಟಕಕ್ಕೆ ಕಾವೇರಿ ವಿಚಾರದಲ್ಲಿ ನಿರಂತರವಾದ ಅನ್ಯಾಯ ಆಗುತ್ತಲೇ ಬಂದಿದೆ. ಅದರಲ್ಲೂ ವಿಶೇಷವಾಗಿ ಪ್ರತಿ ತಿಂಗಳೂ ಇಂತಿಷ್ಟೇ ಪ್ರಮಾಣದ ನೀರನ್ನು ಹರಿಸಬೇಕೆಂಬ ಕರಾರು ಕರಾಳತೆಯಿಂದ ಕೂಡಿದೆ. ನೀರು ಇರಲಿ, ಇಲ್ಲದಿರಲಿ, ಇಷ್ಟೇ ಪ್ರಮಾಣದ ನೀರು ಹರಿಸಬೇಕೆಂಬ ತಮಿಳುನಾಡಿನ ವಾದ ಅಸಂಬದ್ದವಾಗಿದೆ. ಇದಕ್ಕೆ ಪೂರಕವಾಗಿ ಸಮಿತಿ ಅಥವಾ ಪ್ರಾಧಿಕಾರಗಳು ವರ್ತಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಸರ್ವಪಕ್ಷಗಳ ಸಭೆಯಲ್ಲಿ ಮಾಸಿಕ ನೀರು ಹರಿಸುವ ಒಪ್ಪಂದದ ರದ್ದತಿಯ ಬಗ್ಗೆಯೂ ಚರ್ಚಿಸಬೇಕು ಎಂದು ಆಗ್ರಹಿಸಿದರು.


ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ದೂರದೃಷ್ಟಿ, ಶ್ರಮ ಮತ್ತು ಬದ್ಧತೆಯಿಂದ ನಿರ್ಮಾಣಗೊಂಡಿರುವ ಕೃಷ್ಣರಾಜಸಾಗರ ವ್ಯಾಪ್ತಿಯ ಜನರ ಕುಡಿಯುವ ನೀರು ಮತ್ತು ಬೆಳೆಗಳ ರಕ್ಷಣೆ ಮೊದಲ ಆಧ್ಯತೆಯಾಗಬೇಕು. ತಮಿಳುನಾಡು ಅನಗತ್ಯವಾಗಿ ಪೋಲು ಮಾಡುತ್ತಿರುವ ನೀರಿನ ಮರು ಸಂಗ್ರಹಕ್ಕೆ ಪ್ರತ್ಯೇಕ ಅಣೆಕಟ್ಟೆಯ ಅಗತ್ಯವಿದ್ದು, ಇದನ್ನು ನ್ಯಾಯಾಲಯ ಮತ್ತು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.