ಇಬ್ಬರೇ ಬಿಜೆಪಿ ಶಾಸಕರ ನೋಡಿ ಬೇಜಾರಾಗುತ್ತೆ: ಸಚಿವ ಮಂಕಾಳ ವೈದ್ಯ

| Published : Jan 10 2024, 01:46 AM IST / Updated: Jan 10 2024, 12:46 PM IST

Mankal Vaidya
ಇಬ್ಬರೇ ಬಿಜೆಪಿ ಶಾಸಕರ ನೋಡಿ ಬೇಜಾರಾಗುತ್ತೆ: ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ಶಾಸಕರು ನಮ್ಮೊಟ್ಟಿಗೆ ಬಂದರೆ ಅವರ ಮೇಲೆ ಯಲ್ಲಾಪುರ-ಮುಂಡಗೋಡ ಜವಾಬ್ದಾರಿ ಕೊಡಬಹುದು. ಆದರೆ, ಅರ್ಧಕ್ಕೆ ಬಂದು ಹಿಂದೆ ಹೋಗಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೆಸರು ಹೇಳದೇ ಪ್ರಸ್ತಾಪಿಸಿದ ವೈದ್ಯ, ಯಲ್ಲಾಪುರದಲ್ಲಿ ನಾವು ಸಂಘಟನೆ, ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ

ಶಿರಸಿ: ಜಿಲ್ಲಾ ಬಿಜೆಪಿಯಲ್ಲಿ ಇರುವವರು ಇಬ್ಬರೇ ಶಾಸಕರು. ಹೀಗಾಗಿ, ಈಗಿನಿಂದಲೇ ಅವರು ಓಡಾಡಿ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಸಂಘಟನೆ ಇದ್ದು, ಸ್ಥಳೀಯವಾಗಿ ಪ್ರಬಲರಾಗಿದ್ದೇವೆ ಎಂದು ಸಚಿವ ಮಂಕಾಳ ವೈದ್ಯ ಬಿಜೆಪಿಗೆ ಕುಟುಕಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನಮ್ಮ ಶಾಸಕರ ಸಂಖ್ಯೆ ಜಾಸ್ತಿ ಇದ್ದು, ಸ್ಥಳೀಯವಾಗಿ ಓಡಾಟ, ಯೋಜನೆಗಳ ರೂಪುರೇಶೆ ಹಾಕಿಕೊಳ್ಳುತ್ತಿದ್ದೇವೆ. 

ಬಿಜೆಪಿ ಸ್ಥಿತಿ ನೋಡಿದರೆ ಬೇಜಾರಾಗುತ್ತದೆ ಎಂದರು.ಯಲ್ಲಾಪುರ ಶಾಸಕರು ನಮ್ಮೊಟ್ಟಿಗೆ ಬಂದರೆ ಅವರ ಮೇಲೆ ಯಲ್ಲಾಪುರ-ಮುಂಡಗೋಡ ಜವಾಬ್ದಾರಿ ಕೊಡಬಹುದು. ಆದರೆ, ಅರ್ಧಕ್ಕೆ ಬಂದು ಹಿಂದೆ ಹೋಗಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೆಸರು ಹೇಳದೇ ಪ್ರಸ್ತಾಪಿಸಿದ ವೈದ್ಯ, ಯಲ್ಲಾಪುರದಲ್ಲಿ ನಾವು ಸಂಘಟನೆ, ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. 

ಮಾರಿಕಾಂಬಾ ಜಾತ್ರಾ ಪೂರ್ವ ಸಭೆ: ಇದಕ್ಕೂ ಮುನ್ನ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ನಡೆದ ಮಾರಿಕಾಂಬಾ ಜಾತ್ರಾಪೂರ್ವ ಸಭೆಯಲ್ಲಿ ಮಾತನಾಡಿದ ವೈದ್ಯ, ದೇಶದೆಲ್ಲಡೇ ಹೆಸರಾಗಿರುವ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಬರುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಹಾಗೂ ಪಾರ್ಕಿಂಗ್ ಗೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಾತ್ರೆಯ ಯಶಸ್ಸಿಗೆ ಮುಖ್ಯ ಕಾರಣಿಕರ್ತರಾಗುವವರು ನಗರಸಭೆ, ಕೆಎಸ್‌ಆರ್‌ಟಿಸಿ, ಹೆಸ್ಕಾಂ ಮತ್ತು ಪೋಲಿಸ್ ಇಲಾಖೆ ಈ ಬಾರಿ ಶಕ್ತಿ ಯೋಜನೆಯಿಂದ ಅತೀ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆ ಹೆಚ್ಚು ಜಾಗರೂಕರಾಗಿರಬೇಕು. ಇಲಾಖೆಯು ನಮ್ಮಿಂದ ಯಾವುದೇ ರೀತಿಯ ಸಹಾಯ ಬಯಸಿದರೂ ನಾವು ಕೊಡಲು ಸಿದ್ಧರಾಗಿದ್ದೇವೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಈ ಬಾರಿ ಬರಗಾಲದ ನಡುವೆ ಜಾತ್ರೆ ಬಂದಿರುವುದರಿಂದ ಅಧಿಕಾರಿಗಳು ಜಾತ್ರೆಯನ್ನು ಸವಾಲಾಗಿ ಸ್ವೀಕರಿಸಬೇಕು. ಮುಖ್ಯವಾಗಿ ಕುಡಿಯುವ ನೀರು, ಶೌಚಾಲಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೇವಿ ಗದ್ದುಗೆ ಹತ್ತಿರವಿರುವ ಖಾಲಿ ಜಾಗ ಗುರುತಿಸಿ ಪಾರ್ಕಿಂಗ್‌ಗೆ ಕಾಯ್ದಿರಿಸಬೇಕು ಎಂದರು.

ಕುಡಿಯುವ ನೀರಿಗಾಗಿ ಪಾಯಿಂಟ್ ಗುರುತಿಸಿ ಕೊಳವೆ ಬಾವಿ ತೆಗೆಸುವ ವ್ಯವಸ್ಥೆ ತುರ್ತಾಗಿ ಆಗಬೇಕಿದೆ. ಹಣಕಾಸಿಗೆ ಯಾವುದೇ ತೊಂದರೆಯಿಲ್ಲ. ಜಾತ್ರೆಗಾಗಿಯೇ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಸಚಿವರು ತಿಳಿಸಿದರು. 

ಮಾರಿಗುಡಿ ಧರ್ಮದರ್ಶಿ ಮಂಡಳಿ ಧರ್ಮದರ್ಶಿ ಸುಧೀರ ಹಂದ್ರಾಳ, ದೇವಾಲಯದ ಜಾಗದಲ್ಲಿ ನಿರ್ಮಿಸಿರುವ ಯಾತ್ರಾ ನಿವಾಸವನ್ನು ದೇವಾಲಯಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಪ್ರವಾಸೋದ್ಯಮ ಇಲಾಖೆ ದಾನಪತ್ರ ಕೇಳಿದ್ದಾರೆ. 

ಇದು ದೇವಾಲಯದಿಂದ ನೀಡಲು ಬರುವುದಿಲ್ಲ. ಇದಕ್ಕೆ ಸಚಿವರು ಮಾರ್ಗದರ್ಶನ ಮಾಡಬೇಕೆಂದು ಹೇಳಿದರು. ಇದಕ್ಕೆ ಸಚಿವರು ಸರ್ಕಾರದ ಜತೆಗೆ ಮಾತನಾಡಿ ಬಗೆಹರಿಸುವುದಾಗಿ ತಿಳಿಸಿದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ, ಉಪವಿಭಾಗಾಧಿಕಾರಿ ಅಪರ್ಣಾ ರಮೇಶ, ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಪೌರಾಯುಕ್ತ ಕಾಂತರಾಜ, ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ್, ನಗರಸಭೆ ಕಂದಾಯ ಅಧಿಕಾರಿ ಆರ್‌.ಎಂ. ವೆರ್ಣೇಕರ್ ಮತ್ತಿತರರಿದ್ದರು.