ದೇವನಹಳ್ಳಿ: ಕನ್ನಡ ಭಾಷೆಯನ್ನು ದಿನನಿತ್ಯ ಬಳಸುತ್ತಾ ಉಳಿಸಿ ಬೆಳೆಸಬೇಕಾದುದು ಪ್ರತಿ ಕನ್ನಡಿಗನ ಆದ್ಯ ಕರ್ತವ್ಯ ಎಂದು೫ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ರಾಮು ಕುರಣಿ ಹೇಳಿದರು.

ದೇವನಹಳ್ಳಿ: ಕನ್ನಡ ಭಾಷೆಯನ್ನು ದಿನನಿತ್ಯ ಬಳಸುತ್ತಾ ಉಳಿಸಿ ಬೆಳೆಸಬೇಕಾದುದು ಪ್ರತಿ ಕನ್ನಡಿಗನ ಆದ್ಯ ಕರ್ತವ್ಯ ಎಂದು೫ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ರಾಮು ಕುರಣಿ ಹೇಳಿದರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದ ವಕೀಲರ ಭವನದಲ್ಲಿ ವಕೀಲರ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಮಕ್ಕಳಿಗೆ ಮನೆಯಲ್ಲಿ ಮಾತೃ ಭಾಷೆ ಕುರಿತು ಅಭಿಮಾನ ಬೆಳೆಸಬೇಕು. ಶಾಲೆಗಳಲ್ಲಿ ಭಾಷೆಯ ಅರಿವು ಮೂಡಿಸಬೇಕು ಎಂದು ಹೇಳಿದರು.

ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್ ಮಾತನಾಡಿ, ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಸ್ವಯಂ ವಕೀಲರಾಗಿದ್ದರು. ಅವರ ಜನ್ಮ ದಿನವನ್ನು ವಕೀಲರ ದಿನವಾಗಿ ಆಚರಿಸಲಾಗುತ್ತಿದೆ. ಸಂವಿಧಾನದ ಅಡಿಯಲ್ಲಿ ನಡೆಯುವ ನ್ಯಾಯಾಲಯಗಳಲ್ಲಿ ವಕೀಲರ ಪಾತ್ರ ಮುಖ್ಯ. ಅದೇ ರೀತಿ ನಮ್ಮನ್ನು ನಂಬಿ ಬಂದ ಕಕ್ಷಿದಾರರಿಗೂ ಪ್ರಾಮಾಣಿಕವಾಗಿ ನ್ಯಾಯ ಕೊಡಿಸಬೇಕು. ಕನ್ನಡ ಎಂಬುದು ಒಂದು ಭಾಷೆಯಷ್ಟೇ ಅಲ್ಲ. ನಮ್ಮ ಭಾವನೆ ನಮ್ಮ ರಕ್ತದ ಕಣದಲ್ಲಿಯೂ ಕನ್ನಡತನ ತುಂಬಿರಬೇಕು. ಅನ್ಯ ಭಾಷೆಯನ್ನು ಹೀಗಳೆಯಬಾರದು. ಕೋರ್ಟ್‌ಗೆ ಬರುವ ವಾದಿ ಪ್ರತಿ ವಾದಿಗಳು ಯಾವ ಭಾಷೆಯವರೇ ಆಗಿರಲಿ, ನಾವು ಅವರಿಗೆ ಮೊದಲು ಸತ್ಯವನ್ನೇ ಹೇಳುತ್ತೇನೆ ಎಂಬ ಪ್ರಮಾಣ ಕನ್ನಡದಲ್ಲಿಯೆ ಮಾಡಿಸುತ್ತೇವೆ. ಭಾಷಾಭಿಮಾನ ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ಅದನ್ನು ಆಚರಣೆಯಲ್ಲಿಡಬೇಕು ಎಂದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಜನಸಾಮಾನ್ಯರಿಂದ ನಿಜವಾದ ಕನ್ನಡ ಬೆಳೆದಿರುವುದು. ಜನಪದರ ಆಡುಭಾಷೆ ಜನಪದ ಸಾಹಿತ್ಯದಿಂದ ಕನ್ನಡದ ಅಸ್ಮಿತೆಯನ್ನು ಉಳಿಸಿದ್ದಾರೆ. ಕನ್ನಡಾಭಿಮಾನಿಗಳಂತೆ ನಿರಭಿಮಾನಿ ಕನ್ನಡಿಗರು ಇದ್ದಾರೆ. ಬೇರೆ ಭಾಷೆಯನ್ನು ಗೌರವಿಸಬೇಕು, ನಮ್ಮ ಭಾಷೆಯ ಮೇಲೆ ಹೆಮ್ಮೆಯಿರಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ, ತಮ್ಮ ವೃತ್ತಿ ಪವಿತ್ರತೆಯನ್ನು ಕಾಪಾಡಿಕೊಂಡು, ಕಕ್ಷಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಬಹುದು. ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ವೃತ್ತಿಯನ್ನು ವ್ಯವಸ್ಥಿತವಾಗಿ ನಡೆಸಬೇಕು. ಅವರ ಸಲಹೆ ಸೂಚನೆಗಳನ್ನು ಪಾಲಿಸಿ ವೃತ್ತಿಯಲ್ಲಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಟಿವಿ ಹರಟೆ ಕಲಾವಿದೆ ಇಂದುಮತಿ ಸಾಲಿಮಠ್ ನಗೆಹೊನಲಲ್ಲಿ ತೇಲಿಸಿದರು.ಇದೇ ವೇಳೆ ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಪ್ರದಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರವೀಣ್ ನಾಯಕ್, ೩ನೇ ಅಪರ ಸಿವಿಲ್ ನ್ಯಾಯಾಧೀಶ ಯಶವಂತಕುಮಾರ್, ಪ್ರಧಾನ ಸಿವಿಲ್ ಮತ್ತು ಜೆ ಎಂ ಎಸ್ ಸಿ ನ್ಯಾಯಾಧೀಶ ವೆಂಕಟೆಶ್, ಸಿವಿಲ್ ನ್ಯಾಯಾಧೀಶರಾದ ಚಂದ್ರಿಕ, ೨ನೇ ಅಪರ ಸಿವಿಲ್ ನ್ಯಾಯಾಧೀಶರಾದ ಕೆಂಚನಗೌಡ ಪಾಟೀಲ, ವಕೀಲರ ಸಂಘದ ಉಪಾಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೃಷ್ಣೋಜಿರಾವ್, ಜಂಟಿ ಕಾರ್ಯದರ್ಶಿ ವಿ.ಮುನೇಗೌಡ, ಖಜಾಂಚಿ ಮಾರೇಗೌಡ, ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳಾದ ರಾಜಣ್ಣ ವಿ, ಡಿ.ಎಂ ಮುನಿಯಪ್ಪ, ಶಿವರಾಜ್‌ಕುಮಾರ್, ಲೋಕೇಶ್, ನಂದೀಶ್, ಸುನಿಲ್, ಮಂಜುನಾಥ್, ನಾಗರಾಜ್, ರಾಜಣ್ಣ, ದಿನೇಶ್ ಕುಮಾರ್, ನಾಗೇಶ್, ಎಸ್.ಭಾಗ್ಯಮ್ಮ ಇತರರಿದ್ದರು.

೦೪ ದೇವನಹಳ್ಳಿ ಚಿತ್ರಸುದ್ದಿ ೦೧

ದೇವನಹಳ್ಳಿಯ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲರ ದಿನಾಚರಣೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು.