ಪರಿಸರ ಸ್ವಚ್ಛಗೊಳಿಸುವ ಮೂಲಕ ನಮ್ಮ ಮಾತೃಭೂಮಿಯನ್ನು ನಿರ್ಮಲವಾಗಿಡಲು ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಸ್ವಚ್ಛತಾ ಆಂದೋಲನವು ಸ್ವಚ್ಛ ಭಾರತ ನಿರ್ಮಾಣದ ಜನಾಂದೋಲನವಾಗಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಪರಿಸರ ಸ್ವಚ್ಛಗೊಳಿಸುವ ಮೂಲಕ ನಮ್ಮ ಮಾತೃಭೂಮಿಯನ್ನು ನಿರ್ಮಲವಾಗಿಡಲು ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಸ್ವಚ್ಛತಾ ಆಂದೋಲನವು ಸ್ವಚ್ಛ ಭಾರತ ನಿರ್ಮಾಣದ ಜನಾಂದೋಲನವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಸೋಮವಾರ ಬೆಳಗ್ಗೆ ಪಟ್ಟಣದ ಗುತ್ತಿಗೆರೆ ಕೆರೆಯ ಆವರಣದಲ್ಲಿ ಕಸಗುಡಿಸುವ ಮೂಲಕ ಹಳಿಯಾಳ ವಿಧಾನ ಸಭಾ ಕ್ಷೇತ್ರಾದ್ಯಂತ ಹಮ್ಮಿಕೊಳ್ಳಲಾದ ಮೂರು ದಿನಗಳ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತೆಯು ಮಹಾತ್ಮಾ ಗಾಂಧಿಯವರ ಮೂಲಮಂತ್ರವಾಗಿದ್ದು, ಸ್ವಚ್ಛತೆಯ ಮೂಲಕ ನಿರ್ಮಲ ದೇಶವನ್ನು ಕಟ್ಟುವ ಬಾಪೂಜಿಯವರ ಕನಸನ್ನು ಸಾಕಾರಗೊಳಿಸುವ ಬಹುದೊಡ್ಡ ಜವಾಬ್ದಾರಿಯು ಎಲ್ಲರ ಮೇಲಿದೆ ಎಂದರು.
ದೇಶಪಾಂಡೆಯವರ ಧರ್ಮಪತ್ನಿ ರಾಧಾ ದೇಶಪಾಂಡೆಯವರು ಶಾಸಕರಿಗೆ ಸಾಥ್ ನೀಡಿದರು. ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ್, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ ಹಾಗೂ ಇತರರು ಇದ್ದರು.ತಾಲೂಕಿನೆಲ್ಲೆಡೆ ಸ್ವಚ್ಛತೆ: ತಾಲೂಕಿನೆಲ್ಲೆಡೆ ಗ್ರಾಮಾಂತರ ಭಾಗದಲ್ಲಿ ಸ್ವಚ್ಛತಾ ಕಾರ್ಯವು ಆಂದೋಲನದ ರೂಪದಲ್ಲಿ ನಡೆಯಿತು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆಗಳ ಸರ್ಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳನ್ನು ಈ ಆಂದೋನದ ಮೇಲ್ವಿಚಾರಣೆಯನ್ನು ನಡೆಸಲು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು.ಇಂದಿನಿಂದ 3 ದಿನ ಸ್ವಚ್ಛತಾ ಅಭಿಯಾನಹಸಿರು ತಪ್ಪಲಿನಲ್ಲಿ ಸ್ವಚ್ಛಂದವಾಗಿ ಬೆಳೆದಿರುವ ದಾಂಡೇಲಿ ನಗರ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ದಾಂಡೇಲಿ ಹಾಗೂ ನಗರದ ಸುತ್ತ ಇರುವ ಗ್ರಾಮಗಳನ್ನು ಮಾ.31ರಿಂದ ಮೂರು ದಿನಗಳ ಕಾಲ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸ್ವಚ್ಛತಾ ಆಂದೋಲನದ ಮೂಲಕ ಸ್ವಚ್ಛತೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದ್ದಾರೆ.31ರಂದು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸ್ವಚ್ಛತೆ ಅಭಿಯಾನಕ್ಕೆ ಶಾಸಕ ಆರ್.ವಿ. ದೇಶಪಾಂಡೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಿತ್ತೂರು ಚೆನ್ನಮ್ಮ ವೃತ್ತದಿಂದ ಕುಳಗಿ ವರೆಗೆ ಸ್ವಚ್ಛತೆ ಕೈಗೊಳ್ಳಲಾಗುವುದು. ಏ.1ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪಟೇಲ್ ವೃತ್ತದಿಂದ ಹಳೆ ದಾಂಡೇಲಿವರೆಗೆ ನಡೆಯಲಿದೆ. ಏ.2ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ರವರೆಗೆ ಹಳೆ ದಾಂಡೇಲಿ ಯಿಂದ ಬೈಲಪಾರ ಮೂಲಕ ಕುಳಗಿವರೆಗೆ ನಡೆಯಲಿದೆ. ಈ ಮೂರು ದಿನಗಳ ಸ್ವಚ್ಛತಾ ಅಭಿಯಾನದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.