ಮನುಷ್ಯ ತನ್ನಷ್ಟಕ್ಕೆ ತಾನು ಹೇಗೆ ಬೇಕಾದರೂ ಬದುಕಬಹುದು. ಇನ್ನೊಬ್ಬರ ಕಷ್ಟ- ಸುಖಕ್ಕೆ ನೆರವಾಗುತ್ತಾ ಇನ್ನೊಬ್ಬರಿಗಾಗಿ ಬದುಕುವುದೆ ನಿಜವಾದ ಸಂಸ್ಕೃತಿ ಎಂದು ಕನ್ನೂರಿನ ಶ್ರೀಮಠದ, ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಕೃಷ್ಣಾ ಸಂಪಗಾಂವಕರ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮನುಷ್ಯ ತನ್ನಷ್ಟಕ್ಕೆ ತಾನು ಹೇಗೆ ಬೇಕಾದರೂ ಬದುಕಬಹುದು. ಇನ್ನೊಬ್ಬರ ಕಷ್ಟ- ಸುಖಕ್ಕೆ ನೆರವಾಗುತ್ತಾ ಇನ್ನೊಬ್ಬರಿಗಾಗಿ ಬದುಕುವುದೆ ನಿಜವಾದ ಸಂಸ್ಕೃತಿ ಎಂದು ಕನ್ನೂರಿನ ಶ್ರೀಮಠದ, ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಕೃಷ್ಣಾ ಸಂಪಗಾಂವಕರ ಮಹಾರಾಜರು ಹೇಳಿದರು.

ಪಟ್ಟಣದ ಸರ್ಕಾರಿ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿನ ಭಾರತ ಸೇವಾ ದಳ ಕಾರ್ಯಾಲಯದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಭರತ ಮುನಿ ಸಂಸ್ಮರಣೆ ಹಾಗೂ ಸಂಸ್ಕಾರ ಭಾರತಿ ವಿಜಯಪುರ ಜಿಲ್ಲಾ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ- ಶಿವ- ಸುಂದರ ಇವುಗಳ ಅಂಗಗಳಾದ ವಿಜ್ಞಾನ, ಧರ್ಮ, ಕಲೆ ಇವುಗಳ ಉದ್ದೇಶ ಒಂದೇ ಆಗಿದೆ. ಇದನ್ನು ತಿಳಿಯಲು ಭಗವಂತನ ಅಂಶವಾದ ವಿಜ್ಞಾನ ಒಂದು ಹಾದಿಯಲ್ಲಿ ಹೋಗುತ್ತಿದೆ. ಧರ್ಮ ಇನ್ನೊಂದು ಹಾದಿಯಲ್ಲಿ ಸಾಗುತ್ತಿದೆ. ಕಲೆ ತಪಸ್ವಿಗಳ ರೀತಿ ಜೀವನ ನಡೆಸುತ್ತಿದೆ ಎಂದರು.

ಸಂಸ್ಕಾರ ಕೋಮಲವಾದ ಮನಸ್ಸುಗಳ ಪ್ರಶ್ನೆಗಳಿಗೆ ನೋವುಂಟಾಗದ ರೀತಿಯಲ್ಲಿ ಮನ ಮುಟ್ಟುವ ಹಾಗೆ ಸಕಾರಾತ್ಮಕವಾಗಿ ಉತ್ತರಿಸುವಂತಹುದು. ಸಂಸ್ಕಾರ ಒಬ್ಬರಿಗೊಬ್ಬರು ಭಾಂದವ್ಯ ಬೆಸೆಯುವಂತೆ ಭಾವನೆಗಳ ಆಧಾರದಲ್ಲಿ ಬದುಕು ಸಾಗಿಸುವಂತಾಗಬೇಕು ಎಂದರು.

ಸಂಸ್ಕಾರ ಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಜೀ ಮಾತನಾಡಿ, ಕಲೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ಜನರಿಗೆ ಮುಟ್ಟಿಸುವುದಾಗಿದೆ. ಕೆಲವರು ತಮ್ಮ ಅಭಿರುಚಿಗೆ ತಕ್ಕ ಹಾಗೆ ಬಿಂಬಿಸಿ ಯುವ ಜನತೆಯನ್ನು ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ನೈಜ ಜಾನಪದಗಳನ್ನು ಹಾಗೂ ನಾಟಕಗಳನ್ನು ವಿಕೃತಿಯನ್ನಾಗಿ ಮಾಡಲಾಗುತ್ತಿದೆ. ದೇವರ ದರುಶನಕ್ಕೆ ತೆರಳಿ ವಿಕೃತಿಯ ನಾಟಕಗಳನ್ನು ವೀಕ್ಷಿಸಿ ವಿಕೃತ ಮನಸ್ಸಿನಿಂದ ವಾಪಸಾಗುತ್ತಾರೆ. ಇದರಿಂದ ಸಮಾಜದಲ್ಲಿನ ಸ್ವಾಸ್ಥ್ಯ ಹಾಳಾಗುತ್ತದೆ.ಮನುಷ್ಯ ಜೀವನದಲ್ಲಿ ಸಾಧನೆಗೆ ವಿಕೃತ ಮನಸ್ಸು ತೊರೆದು ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಎನ್.ಎಸ್.ಹೂಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಲೆಯಲ್ಲಿ ಸಾಧನೆಗೈದು ಕರ್ನಾಟಕ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಇವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಸಂಯೋಜಕ ಕೃಷ್ಣಾ ಬಡಿಗೇರ ಸ್ವಾಗತಿಸಿದರು. ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು. ಗುರಲಿಂಗಪ್ಪ ಸಬರದ ವಂದಿಸಿದರು.